ಮೈಸೂರು: ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ‘ವಚನ ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ’ ವಿಷಯದಡಿಯಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು.
ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ದೇಶದಲ್ಲಿ ಈ ಹಿಂದೆ ನಡೆಯುತ್ತಿದ್ದ ಹಲವಾರು ಶೋಷಣೆಗಳು ಸಂವಿಧಾನ ಜಾರಿಯಾದ ನಂತರ ನಿಂತಿದ್ದರೂ ಇಂದಿಗೂ ಕೆಲವು ಶೋಷಣೆಗಳು ಮುಂದುವರೆದುಕೊಂಡು ಬಂದಿದೆ. ಎಲ್ಲ ಶೋಷಣೆಗಳು ನಿಲ್ಲಬೇಕಾದರೆ ಸಂವಿಧಾನವನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಿವೆ. ಸಂವಿಧಾನ ಎಲ್ಲರನ್ನು ಸಮಾನವಾಗಿ ಕಾಣುತ್ತದೆ. ಎಲ್ಲರು ಸುಖವಾಗಿ ನೆಮ್ಮದಿಯಾಗಿ ಬದುಕಬೇಕು ಎಂಬ ಆಶಯ ಸಂವಿಧಾನದಲ್ಲಿ ಇದೆ. ಇಂತಹ ಸಂವಿಧಾನವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ಸಿಟಿ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷೆ ರಾಜೇಶ್ವರಿ, ಮೈಸೂರು ವಿಶ್ವ ವಿದ್ಯಾಲಯದ ಗಾಂಧಿ ಭವನದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಹಾಗೂ ಇತರರು ಇದ್ದರು.