ಕಿಕ್ಕೇರಿ: ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕೆಂದರೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಇನ್ಸ್ಪೆಕ್ಟರ್ ರೇವತಿ ಸಲಹೆ ನೀಡಿದರು.
ಇಲ್ಲಿನ ಬ್ರಹ್ಮೇಶ್ವರ ದೇಗುಲ ಆವರಣದಲ್ಲಿ ಸಮಾನ ಮನಸ್ಕ ಮಹಿಳೆಯರು ಸಮಾಜ ಸೇವಕಿ ಚಂದ್ರಮತಿ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯೋಗ, ಧ್ಯಾನ, ಅಧ್ಯಯನದಲ್ಲಿ ದೊರಕಿರುವ ಪಿಎಚ್.ಡಿ ಪದವಿಗಾಗಿ ಇಲ್ಲಿನ ಮಹಿಳೆಯರು ನೀಡಿದ ಗೌರವ ಮರೆಯಲಾಗದು. ಇದು ಮಹಿಳೆಯರಿಗೆ ಸ್ಫೂರ್ತಿಯಾಗಬೇಕಿದೆ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕಿದ್ದು, ಸಾಧಕಿಯರು ಪಟ್ಟ ಕಷ್ಟವನ್ನು ನೆನೆಯಬೇಕು ಎಂದರು.
ಸ್ತ್ರೀ ಹೆಸರಿನಲ್ಲಿ ಎಲ್ಲ ನದಿಗಳಿವೆ. ಜನನಿ ಮಹಿಳೆಯಾಗಿದ್ದು ಗೌರವಿಸುವ ಕೆಲಸವಾಗಬೇಕಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿತ್ರಿಬಾಯಿ ಫುಲೆ ಅಕ್ಷರದ ಅವ್ವಳಾಗಿ ಮಾಡಿದ ಸಾಧನೆ ಅನನ್ಯ. ಅಲ್ಲದೆ ಮಹಿಳೆಯರ ಅಧಿಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡದ ವ್ಯವಸ್ಥೆ ನಿರ್ಮಾಣಬೇಕಿದೆ. ಜತೆಗೆ ಪ್ರಾಮಾಣಿಕವಾಗಿ ದುಡಿಯಲು ಮಹಿಳೆಗೆ ಮತ್ತಷ್ಟು ಸೌಲಭ್ಯ ಸಿಗಬೇಕಿದೆ ಎಂದು ಆಶಿಸಿದರು.
ಮನೆಯ ಹೊರಗೆ, ಒಳಗೆ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಮಹಿಳೆಯರಿಗಿದೆ. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಗುಡಿ ಕೈಗಾರಿಕೆ, ಕೌಶಲವನ್ನು ರೂಢಿಸಿಕೊಳ್ಳಬೇಕಿದೆ. ಮಹಿಳಾ ದೌರ್ಜನ್ಯ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಘಟನೆಗಳು ನಡೆದಲ್ಲಿ ಮಾಹಿತಿ ನೀಡಿ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ. ಅರುಣಕುಮಾರ್, ಸಮಾಜ ಸೇವಕಿ ಸರಸ್ವತಿ, ರೇಖಾ, ಸವಿತಾ, ಸುನೀತಾ, ರಾಧಾ, ಪೂಜಾ, ಧನ್ವಿತಾ ಮತ್ತಿತರರಿದ್ದರು.