ಚಿಕ್ಕಮಗಳೂರು: ವಿವೇಕಾನಂದರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ಎಲ್ಲರೊಂದಿಗೆ ಸ್ನೇಹ, ಪ್ರೀತಿ ಬೆಸೆಯುವುದೇ ನಿಜವಾದ ಧರ್ಮ ಎಂಬುದಾಗಿ ಸಾರಿದ ಮಹಾನ್ ಚೇತನ ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್ ತಿಳಿಸಿದರು.
ಸಿಪಿಐ ಜಿಲ್ಲಾ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ನಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಹೋದರತ್ವ, ಸಹಿಷ್ಣುತೆಯೇ ಧರ್ಮದ ಮೂಲ ತಿರುಗಳಾಗಬೇಕೆಂದು ಆಶಿಸಿದ್ದರು ಎಂದು ಹೇಳಿದರು.
ಹಸಿದವನಿಗೆ ಅಧ್ಯಾತ್ಮ ಬೋಧಿಸಿದರೆ ಹಸಿವಿಗೆ ಅಪಮಾನಿಸಿದಂತೆ. ಹಸಿದ ಹೊಟ್ಟೆಗೆ ಅನ್ನ ನೀಡುವುದೇ ಧರ್ಮದ ಧ್ಯೇಯ ಎಂದು ಆಧ್ಯಾತ್ಮಿಕ ಸೂಕ್ಷ್ಮ ಪ್ರತಿಪಾದಿಸಿದರು. ನೆರೆಹೊರೆಯವರನ್ನು ಪ್ರೀತಿಸಿ, ಗೌರವಿಸುವುದು ನಿಜವಾದ ಧರ್ಮಪಾಲನೆ ಎಂಬುದಾಗಿ ಸಾರಿದರು ಎಂದರು.
ಅಂಗನವಾಡಿ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯ ತತ್ವಶಾಸ್ತ್ರವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪರಿಚಯಿಸಿದರು ಮತ್ತು ಸರ್ವಧರ್ಮ ಜಾಗೃತಿಯನ್ನು ಹೆಚ್ಚಿಸಿದರು ಎಂದು ತಿಳಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್ ಮಾತನಾಡಿ, ವಿವೇಕಾನಂದರ ತತ್ವಗಳು ಮತ್ತು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಯುವ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಬಸವರಾಜ್, ತಾಲೂಕು ಅಧ್ಯಕ್ಷೆ ಶೈಲಾ ಬಸವರಾಜ್, ಮೂಡಿಗೆರೆ ಅಧ್ಯಕ್ಷೆ ಶೈಲಾ, ಕಡೂರು ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಕಲಾ, ದೀಪಿಕಾ, ವಸಂತಾ, ರಾಜೇಶ್ವರಿ, ಸುಕನ್ಯಾ, ಯಶೋದಾ, ಪೂರ್ಣಿಮಾ, ಅನಿತಾ, ವಿಜಯಕುಮಾರಿ ಇತರರಿದ್ದರು.