ಗುಂಡ್ಲುಪೇಟೆ: ಹದಗೆಟ್ಟ ರಸ್ತೆಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ತಮ್ಮ ಭಾಗದ ರಸ್ತೆಗಳ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಹೆಚ್ಚಿನ ಕಾಳಜಿವಹಿಸಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಶನಿವಾರ ತಾಲೂಕಿನ ಹಸಗೂಲಿಯಿಂದ ಮಂಚಹಳ್ಳಿ ಗ್ರಾಮದವರೆಗೆ 2 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತೀವ್ರ ಹದಗೆಟ್ಟಿದ್ದ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಹಸಗೂಲಿ ಮಂಚಹಳ್ಳಿ ರಸ್ತೆಗೆ 2 ಕೋಟಿ ರೂ., ಅಗತಗೌಡನಹಳ್ಳಿ ಹೆಗ್ಗಡಹಳ್ಳಿ ರಸ್ತೆಗೆ 1.6 ಕೋಟಿ ರೂ., ಕೆಲಸೂರಿನಿಂದ ಮಲ್ಲಮ್ಮನಹುಂಡಿ ರಸ್ತೆಗೆ 1.8 ಕೋಟಿ ರೂ., ಶಿಂಡನಪುರದಿಂದ ಕಂದೇಗಾಲ ರಸ್ತೆ ಅಭಿವೃದ್ಧಿಗೆ 1.45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 7 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಕೆ.ಪ್ರಭಾಕರ್, ಮಹೇಶ್ವರಿ, ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್, ದೇವಯ್ಯ, ಎಸ್.ಸಿ.ಮಂಜುನಾಥ್, ಬಸವರಾಜು ಇದ್ದರು.