ಹಾನಗಲ್ಲ: ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ಲಾಡ್ಜ್ನಲ್ಲಿ ಜ. 8ರಂದು ನಡೆದ ಹಲ್ಲೆ ಹಾಗೂ ನಂತರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ವಿವಿಧ ಸಂಘಟನೆಗಳು ಕಳವಳ ವ್ಯಕ್ತಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.
ಶುಕ್ರವಾರ ಎಸ್ಪಿಗೆ ಮನವಿ ಸಲ್ಲಿಸಿದ ಹಿಂದು ಜಾಗರಣ ವೇದಿಕೆ ಸದಸ್ಯರು, ಮಹಿಳೆಯ ಮೇಲೆ ಮೃಗಗಳಂತೆ ವರ್ತಿಸಿ, ಗ್ಯಾಂಗ್ರೇಪ್ ನಡೆಸಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಅನ್ಯ ಕೋಮಿನ ಯುವಕರು ನೈತಿಕ ಪೊಲೀಸ್ ಗಿರಿಯ ಮೂಲಕ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಪ್ರಕರಣದ ಕುರಿತು ಯಾವುದೇ ಒತ್ತಡಕ್ಕೆ ಒಳಗಾಗದೆ, ಕೂಲಂಕಷ ತನಿಖೆ ಕೈಗೊಂಡು ನೊಂದ ಮಹಿಳೆಗೆ ನ್ಯಾಯ ಒದಗಿಸಬೇಕು. ಇದರಲ್ಲಿ ತನಿಖಾಧಿಕಾರಿಗಳ ಮೇಲೆ ಒತ್ತಡಗಳು ಕಂಡುಬಂದಲ್ಲಿ ಬೀದಿಗಿಳಿದು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವೇದಿಕೆ ಸದಸ್ಯರಾದ ಹರೀಶ ಹಾನಗಲ್ಲ, ಪುಷ್ಪಲತಾ ಚಕ್ರಸಾಲಿ, ಲಲಿತಾ ಗುಂಡೇನಹಳ್ಳಿ, ರತ್ನಾ ಭೀಮಕ್ಕನವರ, ಶಶಿಕುಮಾರ ಮುಗದೂರ, ಸಚಿನ ರಾಮಣ್ಣನವರ, ಪ್ರಸಾದ ಪಾವಲಿ, ರಾಘವೇಂದ್ರ ಓಲೇಕಾರ, ಮಾಲತೇಶ ಕರಬಣ್ಣನವರ, ಹನುಮಂತ ರಾಮಣ್ಣನವರ, ಕಿರಣ ಹಿರೇಮನಿ, ಶ್ರೀನಿವಾಸ ಶಿವಪೂಜಿ, ಕೃಷ್ಣಾ ಕೊರಚರ, ಚೇತನ ಪಾಟೀಲ, ಲಿಖಿತ್ ಹದಳಗಿ ಇತರರು ಇದ್ದರು.