ಬ್ಯಾಡಗಿ: ಯೂಕ್ರೇನ್ನಲ್ಲಿ ಸಿಲುಕಿರುವ ಬ್ಯಾಡಗಿಯ ವ್ಯೆದ್ಯ ವಿದ್ಯಾರ್ಥಿ ಕುಶಲ ಸಂಕಣ್ಣನವರ ಪಾಲಕರ ಮನೆಗೆ ಶನಿವಾರ ಶಾಸಕ ಎಚ್.ಕೆ.ಪಾಟೀಲ ಭೇಟಿ ನೀಡಿ ಧೈರ್ಯ ಹೇಳಿದರು.
ಇಲ್ಲಿನ ವಿದ್ಯಾನಗರದ ವಿದ್ಯಾರ್ಥಿಯ ನಿವಾಸದಲ್ಲಿ ಪಾಲಕರಿಗೆ ಸಮಾಧಾನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂಕ್ರೇನ್ನಲ್ಲಿ ಸಿಲುಕಿರುವ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ತಲುಪಬೇಕು. ಈ ಸಮಯದಲ್ಲಿ ಯಾರ ಮೇಲೂ ದೂರುವ ಬದಲಾಗಿ ತಾಯ್ನಾಡಿಗೆ ಮರಳಲು ವ್ಯವಸ್ಥೆ ಮಾಡಬೇಕು. ಅವರ ಕುಟುಂಬಗಳ ಆತಂಕ ದೂರಮಾಡಬೇಕಿದೆ. ಅಲ್ಲಿನ ಕೆಲ ವಿದ್ಯಾರ್ಥಿಗಳು ಮಾಹಿತಿ ನೀಡಿದಂತೆ ದೇಶದತ್ತ ಎಲ್ಲರೂ ಮರಳುತ್ತಿದ್ದಾರೆ. ಪಾಲಕರಲ್ಲಿ ಆತಂಕ ಬೇಡ ಎಂದರು.
ಜಿಲ್ಲೆಗೊಂದು ಮೆಡಿಕಲ್ ಕಾಲೇಜ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಗೊಂದು, ದೊಡ್ಡ ಜಿಲ್ಲೆಗಳಿದ್ದರೆ ಎರಡೆರಡು ಕಾಲೇಜ್ ಮಂಜೂರು ಮಾಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು. ಇದರಿಂದ ಎಲ್ಲ ವರ್ಗದವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದರು.
ಬಜೆಟ್ನಲ್ಲಿ ದೊಡ್ಡ ಯೋಜನೆಗಳಿಲ್ಲ: ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಬಜೆಟ್ನಲ್ಲಿ ಹೇಳಿಕೊಳ್ಳುವಂತ ದೊಡ್ಡ ಯೋಜನೆಗಳಿಲ್ಲ. 5.18 ಲಕ್ಷ ಕೋಟಿ ರೂಪಾಯಿ ಸರ್ಕಾರದ ಮೇಲೆ ಸಾಲದ ಹೊರೆಯಿದ್ದು, ಆರ್ಥಿಕ ನೀತಿ ಮೀರಿ ಸಾಲವಾಗಿದೆ ಎಂದರು.