ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ತಾಯಿಯ ಬಗ್ಗೆ ಹೀನ ಪದ ಬಳಕೆ ಮಾಡಿ ಅವಮಾನಿಸಿರುವ ಮಾಜಿ ಸಚಿವ ಸಿ.ಟಿ.ರವಿ ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ಶಿವಮೊಗ್ಗ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಿ ಬಹಿಷ್ಕರಿಸಲಾಗುವುದು ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಎಚ್ಚರಿಕೆ ನೀಡಿದರು.
ತಾಯಿಗೆ ಪವಿತ್ರವಾದ ಸ್ಥಾನವಿದೆ. ತಾಯಿಯನ್ನು ಭೂತಾಯಿಗೆ ಹೋಲಿಸುವುದು ನಮ್ಮ ಸಂಸ್ಕೃತಿ. ರಾಜಕಾರಣದಲ್ಲಿ ಪರಸ್ಪರ ಟೀಕೆ ಮಾಡುವುದು ಸಾಮಾನ್ಯ. ಆರೋಪ-ಪ್ರತ್ಯಾರೋಪ ಮಾಡುವುದು ಮಾಮೂಲಿ. ಆದರೆ ಹೆಣ್ಣು ಸಂಕುಲವನ್ನು ಕೀಳಾಗಿ ಕಾಣುವುದು ಸರಿಯಲ್ಲ. ಸಿ.ಟಿ.ರವಿ ಅವರು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಿಸ್ತಿನ ಪಕ್ಷದವರೆಂದು ಹೇಳಿಕೊಳ್ಳುವ ಸಿ.ಟಿ.ರವಿ ಕೆಟ್ಟ ಪದಗಳನ್ನು ಬಳಸಿರುವುದು ಇಡೀ ಪಕ್ಷಕ್ಕೆ, ಅವರ ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ವಿಕೃತ ಆಲೋಚನೆಯ ಸಿ.ಟಿ.ರವಿ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ತಾಯಿಯನ್ನು ದೇವಿ ರೂಪದಲ್ಲಿ ಪೂಜಿಸುವ ಪರಂಪರೆ ಭಾರತೀಯರದ್ದಾಗಿದೆ. ಸಿ.ಟಿ.ರವಿ ಇಡೀ ದೇಶದ ಪರಂಪರೆಗೆ ನೋವುಂಟು ಮಾಡಿದ್ದಾರೆ. ರಾಜಕೀಯವಾಗಿ ಟೀಕೆಯನ್ನು ಪರಸ್ಪರ ಮಾಡಬೇಕೇ ವಿನಃ ಕುಟುಂಬದವರ ಬಗ್ಗೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಪ್ರಮುಖರಾದ ತಿಮ್ಮರಾಜು, ಕೃಷ್ಣಪ್ಪ, ಧೀರರಾಜ್ ಹೊನ್ನವಿಲೆ, ಬಿ.ಜಗದೀಶ್, ವೀರೇಶ್, ಗಿರೀಶ್, ಹರ್ಷ ಭೋವಿ ಇದ್ದರು.