ಸಿಂಧನೂರು: ವಿವಿಧ ಬೆಳೆಗಳನ್ನು ರಕ್ಷಿಸಲು ಏ.10 ವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಬೇಕೆಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಎಡದಂಡೆ ನಾಲೆಗೆ ನಿತ್ಯ 3500 ಕ್ಯೂಸೆಕ್ನಂತೆ ಮಾ.31 ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಕೈಗೊಳ್ಳಾಗಿತ್ತು. ಸಭೆಯಲ್ಲಿ ನಿರ್ಧರಿಸಿದಂತೆ ನೀರು ಹರಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲ ಉಪಕಾಲುವೆಗಳನ್ನು ಬಂದ್ ಮಾಡಿ, ಕೆಳ ಭಾಗಕ್ಕೆ ನೀರು ಹರಿಸುವ ದುಸ್ಸಾಹಸಕ್ಕೆ ಕೈಹಾಕಿರುವುದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ. ಈ ಹಿಂದೆ ಆಯಾ ಕಾಲುವೆ ವ್ಯಾಪ್ತಿಯಲ್ಲಿನ ಬೆಳೆ ಆಧರಿಸಿ ನೀರಿನ ಗೇಜ್ ಕಡಿಮೆ ಮಾಡಿ ಕೆಳ ಭಾಗಕ್ಕೆ ನೀರು ಹರಿಸಲಾಗುತ್ತಿತ್ತು. ಆದರೆ, ಈ ಬಾರಿ ರೈತರಿಗೆ ತೊಂದರೆಯಾಗುವಂಥ ತೀರ್ಮಾನವನ್ನು ಅಧಿಕಾರಿಗಳು ಕೈಗೊಂಡಿರುವುದು ಸರಿಯಲ್ಲ ಎಂದು ದೂರಿದರು.