ರಾಯಚೂರು: ಕೆಜಿಬಿವಿ ಮತ್ತು ಕೆಕೆಜಿಬಿವಿ ಶಾಲೆ ಮತ್ತು ವಸತಿ ನಿಲಯಗಳ ಗುತ್ತಿಗೆ ನಾಕರರು ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಹೊಂದಿರುವ ಗೊಂದಲ ನಿವಾರಣೆಗೆ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.
ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್ಗೆ ಗುರುವಾರ ಮನವಿ ಸಲ್ಲಿಸಿತು. ಮಾರ್ಚ್ನಿಂದ ಇಲ್ಲಿಯವರೆಗೆ ವೇತನ ಇಲ್ಲದೆ ನೌಕರರಿಗೆ ತೊಂದರೆಯಾಗಿದೆ. ನೌಕರರ ನೆರವಿಗೆ ಇಲಾಖೆ ಧಾವಿಸಬೇಕು. ಕರೊನಾ ಕಾರಣ ಆ.31ರವರೆಗೆ ಶಾಲೆ ಪುನರಾರಂಭ ಮಾಡಬಾರದೆಂಬ ನಿರ್ಧಾರ ಉತ್ತಮವಾಗಿದೆ. ಆದರೆ, ಶಾಲೆ, ವಸತಿನಿಲಯಗಳ ಸೇವೆ ಮೇಲೆ ಅವಲಂಬಿತರಾಗಿರುವ ನೌಕರರ ಬದುಕು ಅತಂತ್ರಕ್ಕೆ ಒಳಗಾಗಿದೆ. ಕೆಲ ನೌಕರರಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಹೇಳಲಾಗುತ್ತಿದ್ದು, ಕೆಲವರಿಗೆ ಹೇಳದಿರುವುದು ಗೊಂದಲ ಉಂಟಾಗಿದೆ.
ಶಾಲೆ ಆರಂಭ ಇಲ್ಲದಿದ್ದರೂ ಮನೆಗಳಿಂದಲೇ ದಾಖಲಾತಿ, ಆನ್ಲೈನ್ ಬೋಧನೆ, ಸ್ವಚ್ಛತೆ ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗಿದ್ದು, ಹೊರಗುತ್ತಿಗೆ ಸಿಬ್ಬಂದಿಗೆ ಏ.1ರ ನಂತರದಲ್ಲಿ ವೇತನ ಪಾವತಿ ಮಾಡಲಾಗಿಲ್ಲ. ಕಾರಣ ಯಥಾ ಪ್ರಕಾರ ನೌಕರರಿಗೆ ವೇತನ ಪಾವತಿಸಬೇಕು. ವೇತನ ಬಾಕಿ ಹೆಚ್ಚಳ ಅರಿಯರ್ಸ್ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಸಂಘದ ಅಧ್ಯಕ್ಷ ಎನ್.ಎಸ್.ವೀರೇಶ, ಪದಾಧಿಕಾರಿಗಳಾದ ಲಕ್ಷ್ಮಿ, ಮಂಜುಳಾ, ಮಹೆಬೂಬಿ, ಅಣ್ಣಪ್ಪ ಇದ್ದರು.