ಪುತ್ತೂರು: ಸಂವಿಧಾನದ ಆಶಯಗಳನ್ನು ರಕ್ಷಿಸುವಲ್ಲಿ ವಕೀಲರ ಪಾತ್ರ ಮಹತ್ತರ. ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ ಹಿಂದುಳಿದಿದ್ದು, ಕಳೆದು ಹೋಗಿರುವ ಸಾಮರಸ್ಯದ ವೈಭವ ಹಿಂದಿರುಗಿ ತರಬೇಕು. ಇದಕ್ಕಾಗಿ ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸುವ ಅಗತ್ಯವಿದೆ ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.
ಪುತ್ತೂರು ಲಯನ್ಲ್ ಕ್ಲಬ್ನಲ್ಲಿ ನಡೆದ ವಕೀಲರ ಜತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಮೂರ್ಖರಿಂದ ಈ ದೇಶ ಹಾಳಾಗುತ್ತಿಲ್ಲ. ಜ್ಞಾನಿಗಳು ಸುಮ್ಮನೆ ಕುಳಿತುಕೊಂಡಿರುವುದರಿಂದ ಹಾಳಾಗಿದೆ. ವಕೀಲರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಬೇಕು ಎಂದರು.
ಶಾಸಕ ಅಶೋಕ್ಕುಮಾರ್ ರೈ ಮಾತನಾಡಿದರು. ನೋಟರಿ ವಕೀಲ ನಿರ್ಮಲ್ ಕುಮಾರ್ ಜೈನ್ ಮಾತನಾಡಿ, ವಕೀಲರ ಧ್ವನಿಯಾಗಿ ಪದ್ಮರಾಜ್ ಆರ್.ಪೂಜಾರಿ ಸಂಸತ್ತಿನಲ್ಲಿ ಕೆಲಸ ಮಾಡಲಿ ಎಂದು ಶುಭಹಾರೈಸಿದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ್ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಎಂ.ಪಿ.ಅಬೂಬಕ್ಕರ್, ದುರ್ಗಾ ಪ್ರಸಾದ್ ರೈ ಕುಂಬ್ರ, ಬೆಟ್ಟ ಈಶ್ವರ ಭಟ್, ಮನೋಹರ್ ಎ, ಎಂ.ಎಸ್.ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಭಾಸ್ಕರ್ ಕೋಡಿಂಬಾಳ ಸ್ವಾಗತಿಸಿದರು. ಶಾಕಿರ್ ಕಾರ್ಯಕ್ರಮ ನಿರೂಪಿಸಿದರು.
ವಕೀಲರು ಮನಸ್ಸು ಮಾಡಿದರೆ ದೇಶದಿಂದ ಭ್ರಷ್ಟಾಚಾರ ಕಿತ್ತು ಹಾಕಬಹುದು. ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಕಿತ್ತಾಡದೆ, ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಅವಕಾಶ ನೀಡಿದರೆ ಎಲ್ಲರೂ ಉತ್ತಮ ಕೆಲಸ ಮಾಡಲು ಸಾಧ್ಯ. ಪದ್ಮರಾಜ್ ಅವರಿಗೂ ಒಂದು ಅವಕಾಶ ಕೊಟ್ಟು ನೋಡಿ. ಈ ಜಿಲ್ಲೆಯಲ್ಲಿ ಮಾದರಿಯಾಗಿ ಅಭಿವೃದ್ಧಿ ಮಾಡಿ ತೋರಿಸಲಿದ್ದಾರೆ.
-ಅಶೋಕ್ ಕುಮಾರ್ ರೈ ಶಾಸಕ