ಕುಷ್ಟಗಿ: ನಿತ್ಯದ ಕೆಲಸಗಳ ಜತೆಗೆ ಅಧ್ಯಾತ್ಮ ವಿಚಾರಗಳಿಗೆ ಸಮಯ ಮೀಸಲಿಡಬೇಕು ಎಂದು ಪಟ್ಟಣದ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ಹೇಳಿದರು.
ಮದ್ದಾನೇಶ್ವರ ಜಾತ್ರೆ, ಲಿಂ.ಕರಿಬಸವ ಶ್ರೀಗಳ 48ನೇ ಪುಣ್ಯಾರಾಧನೆ ನಿಮಿತ್ತ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಅಧ್ಯಾತ್ಮ ಚಿಂತನೆಯಿಂದ ವ್ಯಕ್ತಿಯಲ್ಲಿ ಉನ್ನತ ವಿಚಾರಗಳು ವಿಕಸಿತಗೊಳ್ಳುತ್ತವೆ. ಧ್ಯಾನ, ದೇವರ ದರ್ಶನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಜಾಗೃತಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.
ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿ, ಭಾವೈಕ್ಯತೆಯ ಸಂಕೇತವಾಗಿ ಜಾತ್ರೆ, ಉತ್ಸವ ನಡೆಸಲಾಗುತ್ತದೆ. ಜಾತಿ, ಬೇಧ ಮರೆತು ಎಲ್ಲರೂ ಒಗ್ಗೂಡುವ ಕೆಲಸ ಜಾತ್ರೆಗಳಿಂದ ಆಗುತ್ತಿದೆ ಎಂದರು. ವಿವಿಧ ವಾದ್ಯ ವೃಂದ ಹಾಗೂ ಕುಂಭ ಮೆರವಣಿಗೆಯೊಂದಿಗೆ ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಮಂಗಳೂರಿನ ಸಿದ್ಧಲಿಂಗ ಶಿವಾಚಾರ್ಯರು ವಟುಗಳಿಗೆ ಅಯ್ಯಚಾರ ಲಿಂಗ ದೀಕ್ಷೆ ನೀಡಿದರು.