ಕುಷ್ಟಗಿ: ರಸ್ತೆ ಅಪಘಾತ ಪ್ರಕರಣದಲ್ಲಿ ಮೃತ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ತೋರಿದ ಹಿನ್ನೆಲೆಯಲ್ಲಿ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಗುರುವಾರ ಹಾವೇರಿ ವಿಭಾಗದ ಬ್ಯಾಡಗಿ ಘಟಕದ ಬಸ್ ವಶಕ್ಕೆ ತಗೆದುಕೊಂಡಿದೆ.
ತಾಲೂಕಿನ ಹನುಮಸಾಗರದ ದಾವಲ್ಬಿ ಅಬ್ದುಲ್ಸಾಬ್ ಹೊಸಮನಿ ಎನ್ನುವವರು ಗ್ರಾಮದ ಇಳಕಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಬ್ಯಾಡಗಿ ಘಟಕದ ಬಸ್ ಡಿಕ್ಕಿಯಾಗಿ ದಾವಲ್ಬಿ ಮೃತಪಟ್ಟಿದ್ದರು.
2016ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸ್ಥಳೀಯ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ವಿಚಾರಣೆ ನಡೆಸಿದ ಕೋರ್ಟ್ ಮೃತ ಕುಟುಂಬಕ್ಕೆ 18.81ಲಕ್ಷ ರೂ. ಪರಿಹಾರ ನೀಡುವಂತೆ ಬ್ಯಾಡಗಿ ಸಾರಿಗೆ ಘಟಕಕ್ಕೆ ಆದೇಶಿಸಿತ್ತು.
ಪರಿಹಾರ ನೀಡಲು ಸಾರಿಗೆ ಸಂಸ್ಥೆ ವಿಳಂಬ ತೋರಿದ್ದರಿಂದ ಕೋರ್ಟ್ ವಾರೆಂಟ್ ಹೊರಡಿಸಿ ಬಸ್ ಜಪ್ತಿ ಮಾಡಲು ಆದೇಶಿಸಿದೆ. ಹನುಮಸಾಗರ ಮಾರ್ಗವಾಗಿ ಬ್ಯಾಡಗಿಗೆ ತೆರಳುತ್ತಿದ್ದ ವೇಳೆ ಕೋರ್ಟ್ ಸಿಬ್ಬಂದಿ ಬಸ್ ವಶಕ್ಕೆ ತಗೆದುಕೊಂಡಿದ್ದಾರೆ.
ಬಡ್ಡಿ ಇತರ ಖರ್ಚು ಸೇರಿ ಒಟ್ಟು 21.48ಲಕ್ಷ ರೂ. ಸಾರಿಗೆ ಸಂಸ್ಥೆ ಭರಿಸಬೇಕಿದೆ ಎಂದು ಮೃತ ದಾವಲ್ಬಿ ಕುಟುಂಬದ ಪರ ವಾದ ಮಂಡಿಸಿದ ವಿಜಯಮಹಾಂತೇಶ ಕುಷ್ಟಗಿ ತಿಳಿಸಿದ್ದಾರೆ.