ಕುಷ್ಟಗಿ: ರಾಜ್ಯೋತ್ಸವ ಸಂಬಂಧ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಮತ್ತು ಬಹುತೇಕ ಅಧಿಕಾರಿಗಳು ಗೈರಾಗಿದ್ದರಿಂದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕ್ನಡ ರಾಜ್ಯೋತ್ಸವ ಆಚರಣೆಗೆ ಅಸಡ್ಡೆ ತೋರಿದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಬೇಕಿದ್ದ ತಹಸೀಲ್ದಾರರೇ ಗೈರಾಗಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿ ಹೊರತುಪಡಿಸಿ ಬೇರಾವ ಇಲಾಖೆಗಳ ಅಧಿಕಾರಿಗಳು ಬಂದಿಲ್ಲ. ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಪ್ರತಿ ವರ್ಷ ಅಧಿಕಾರಿಗಳು ಪಾಲ್ಗೊಳ್ಳುವುದೇ ಇಲ್ಲ. ಇಂಥವರ ವಿರುದ್ಧ ಈವರೆಗೆ ಕ್ರಮವೂ ಆಗಿಲ್ಲ. ಈ ಬಾರಿಯೂ ನಿರ್ಲಕ್ಷ್ಯ ಕಂಡುಬಂದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖಂಡರಾದ ರವೀಂದ್ರ ಬಾಕಳೆ, ದೇವರಾಜ ಹಜಾಳದ್ ಇತರರು, ಗ್ರೇಡ್ 2 ತಹಸೀಲ್ದಾರ್ ಮುರುಳೀಧರರನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಬಾರಿ ಆಚರಣೆ ವೇಳೆ ವಿವಿಧ ಇಲಾಖೆಗಳಿಗೆ ವಹಿಸಿದ್ದ ಜವಾಬ್ದಾರಿಗಳನ್ನು ಈ ವರ್ಷವೂ ವಹಿಸಲಾಯಿತು. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಕಾರ್ಯಕ್ರಮ ಹಾಗೂ ನಾಡದೇವತೆ ಭಾವಚಿತ್ರ ಮೆರವಣಿಗೆಯನ್ನು ಬೇಗ ಆರಂಭಿಸುವ ನಿರ್ಣಯ ಕೈಗೊಳ್ಳಲಾಯಿತು. ಕಸಾಪ ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ನಬೀಸಾಬ್ ಕುಷ್ಟಗಿ, ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಕಾರ್ಯದರ್ಶಿ ಎಚ್.ಮಹೇಶ, ನಿಕಟಪೂರ್ವ ಅಧ್ಯಕ್ಷ ಉಮೇಶ ಹಿರೇಮಠ, ಹಿರೇಮನ್ನಾಪುರ ಹೋಬಳಿ ಘಟಕದ ಅಧ್ಯಕ್ಷ ವಿ.ಎಸ್.ಕಾಡಗಿಮಠ, ದೋಟಿಹಾಳ ಘಟಕದ ಅಧ್ಯಕ್ಷ ರೆಹಮಾನಸಾಬ್ ಮಾರನಬಸರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಪ್ರಮುಖರಾದ ತಾಜುದ್ದೀನ್ ದಳಪತಿ ಇತರರಿದ್ದರು.
4.33 ಲಕ್ಷ ರೂ. ಪಾವತಿಸಿದೆವು: ರಾಜ್ಯೋತ್ಸವ ದಿನ ಪ್ರತಿ ಮನೆಯ ಮೇಲೆ ಕನ್ನಡ ಧ್ವಜ ಹಾರಿಸುವ ಹಾಗೂ ಕಾರ್ಯಕ್ರಮದಲ್ಲಿ ಕನ್ನಡ ಶಾಲು ವಿತರಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಕಸಾಪ ಹನುಮಸಾಗರ ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ ಪ್ರಸ್ತಾಪಿಸಿದರು. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸಾರ್ವಜನಿಕರು ಧ್ವಜ ಖರೀದಿಸಬೇಕಿತ್ತು. ಯಾರೂ ಹಣ ನೀಡಲಿಲ್ಲ. ಹೀಗಾಗಿ 4.33 ಲಕ್ಷ ರೂ.ಗಳನ್ನು ಪಂಚಾಯಿತಿಗಳಿಂದಲೇ ಪಾವತಿಸಬೇಕಾಯಿತು ಎಂದು ತಾಪಂ ಎಸ್ಡಿಎ ಎನ್.ಸಂಗಪ್ಪ ಹೇಳಿದರು.