ಕುಷ್ಟಗಿ: ಸೊಸೆಯನ್ನು ಮಗಳೆಂದು, ಅತ್ತೆಯನ್ನು ತಾಯಿಯೆಂದು ಭಾವಿಸಿ ನಡೆದಾಗ ಜೀವನ ಸುಖಮಯವಾಗುತ್ತದೆ ಎಂದು ಪಟ್ಟಣದ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ಹೇಳಿದರು.
ಹಿರೇಮನ್ನಾಪುರದ ಕಾಶಿ ವಿಶ್ವನಾಥ ಜಾತ್ರೋತ್ಸವ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಅತ್ತೆ-ಸೊಸೆ ನಡುವಿನ ಸಮನ್ವಯತೆಯ ಕೊರತೆಯಿಂದ ಕೌಟುಂಬಿಕ ನೆಮ್ಮದಿ ಹಾಳಾಗುತ್ತಿದೆ. ಮನೆಯ ಸದಸ್ಯರೆಲ್ಲ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ಕೌಟುಂಬಿಕ ವಿಘಟನೆ ತಡೆಯಬೇಕಿದೆ. ಸತಿ-ಪತಿಗಳ ಮಧ್ಯೆ ಅನುಮಾನಕ್ಕೆ ಆಸ್ಪದ ಕೊಡದೆ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುವಂತೆ ಸಲಹೆ ನೀಡಿದರು.
ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಬಡ ಕುಂಟುಂಬಗಳ ಹೊರೆ ಕಡಿಮೆ ಮಾಡುವ ಸಾಮೂಹಿಕ ವಿವಾಹ ಪರಂಪರೆ ಮುಂದುವರಿಯಬೇಕಿದೆ ಎಂದರು. ಎಂ.ಗುಡದೂರಿನ ನೀಲಕಂಠಯ್ಯ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಬೆಳಗ್ಗೆ ಕಾಶಿ ವಿಶ್ವನಾಥ ಹಾಗೂ ಶರಣಬಸವೇಶ್ವರ ಮೂರ್ತಿಗಳಿಗೆ ಅಭಿಷೇಕ ನಡೆಯಿತು. ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರ ನೇತೃತ್ವದಲ್ಲಿ ಜಂಗಮ ವಟುಗಳಿಗೆ ಅಯ್ಯಚಾರ ಲಿಂಗದೀಕ್ಷೆ ನೆರವೇರಿತು. 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.