ಕುರುಗೋಡು: ಸರ್ಕಾರಿ ನೌಕರರಿಗೆ ಇಲ್ಲದ ಪಿಂಚಣಿ, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಏಕೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ ಪ್ರಶ್ನಿಸಿದರು.
ಸರ್ಕಾರಿ ನೌಕರರ ತಾಲೂಕು ಸಂಘ ಪಟ್ಟಣದ ಸಪಪೂ ಕಾಲೇಜುನಲ್ಲಿ ಗುರುವಾರ ಆಯೋಜಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ತಾರತಮ್ಯ ಧೋರಣೆ ಸರಿಯಲ್ಲ. ನಮ್ಮ ವಿರುದ್ಧ ಎಸ್ಮಾ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೆದರಿಸಲಾಗುತ್ತಿದೆ. ಇದಕ್ಕೆ ನಾವು ಜಗ್ಗಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿರುವ ಸರ್ಕಾರಿ ನೌಕರರು ಮಾ.1ರಿಂದ ಅನಿರ್ದಿಷ್ಟಾವಧಿ ವರೆಗೆ ಕರ್ತವ್ಯಕ್ಕೆ ಗೈರಾಗಲಿದ್ದೇವೆ. ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಹಿಮಾಚಲಪ್ರದೇಶ, ಛತ್ತಿಸ್ಘಡ ರಾಜ್ಯಗಳಲ್ಲಿರುವಂತೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ನಡೆಸುತ್ತೇವೆ. ತಾಲೂಕಿನ ಎಲ್ಲ ಸರ್ಕಾರಿ ನೌಕರರು ನೇರವಾಗಿ ಬೆಂಬಲಿಸಿದ್ದು, ಪರೋಕ್ಷವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಬಲಿಸುವರು ಎಂದರು.
ಕೆಲಸ ಮತ್ತು ಅಧಿಕಾರಿಗಳು ಒತ್ತಡ ಹೇರುತ್ತಿರುವುದರಿಂದ ಬಿಪಿ, ಶುಗರ್ ಬರುತ್ತಿವೆ. ಕೊಡುವ ಸಂಬಳಕ್ಕಿಂತ ಕಾರ್ಯಭಾರ ಅಧಿಕವಾಗಿದೆ. ಬೇಡಿಕೆಗಳನ್ನು ಈಡೇರಿಸದ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದರು.
ಸಂಘದ ಪದಾಧಿಕಾರಿಗಳಾದ ಕೆ.ಮಂಜುನಾಥ, ಬಿ.ರಾಮು, ಮಾರುತಿ ಗಾಳಿ, ತುಕಾರಾಂ ಗೊರವ, ರಾಮಲಿ, ಎ.ಮಂಜುನಾಥ, ನಾಗರಾಜ ಮಸೂತಿ, ಮೃತ್ಯುಂಜಯ, ಚಿನ್ನಬೊರಾ ನಾಯಕ ಹಾಗೂ ಸರ್ಕಾರಿ ನೌಕರರಾದ ಗೋವಿಂದರಾಜ, ಶಾಂತಾ ನಾಯ್ಕ, ಜಗದೀಶ್, ಬಸವರಾಜ, ಡಿ.ಜಿ.ಸತೀಶ್ ಇತರರಿದ್ದರು.