ಕಂಪ್ಲಿ: ನೆನೆಗುದಿಗೆ ಬಿದ್ದಿದ್ದ ಬುಕ್ಕಸಾಗರ ಬಹುಗ್ರಾಮ ಗ್ರಾಮೀಣ ಕುಡಿವ ನೀರಿನ ಕಾಮಗಾರಿ ಯೋಜನೆಗೆ ಮತ್ತೆ ಚಾಲನೆ ದೊರೆತಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಕಂಪ್ಲಿ ತಾಲೂಕಿನ ಸಣಾಪುರ, ಕಣವಿ ತಿಮ್ಮಲಾಪುರ, ದೇವಸಮುದ್ರ, ನಂ.10ಮುದ್ದಾಪುರಗಳಲ್ಲಿ 75ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಐದು ಗ್ರಾಮಗಳ ಕುಡಿವ ನೀರಿನ ಯೋಜನೆಯ ಕಾಮಗಾರಿ ಪೈಪ್ಲೈನ್ ಕಣವೆ ತಿಮ್ಮಲಾಪುರದ ಕಾಯ್ದಿಟ್ಟ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಕಾರಣ ಅರಣ್ಯ ಇಲಾಖೆ ಸೇರಿ ಇತರ ಇಲಾಖೆಗಳ ತಕರಾರಿತ್ತು. ಮೂರು ವರ್ಷಗಳ ಸತತ ಪರಿಶ್ರಮ ಮತ್ತು ಅಧಿವೇಶನದಲ್ಲಿ ಚರ್ಚಿಸಿದ ಫಲವಾಗಿ ಅರಣ್ಯ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ದೊರೆತಿದ್ದು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಇದರಿಂದ ಜೆಜೆಎಂ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಪೂರೈಸಲಾಗುವುದು. ಕಂಪ್ಲಿ ತುಂಗಭದ್ರಾ ನದಿ ಸೇತುವೆ ಶಿಥಿಲಗೊಂಡಿದ್ದು ಹೊಸ ಸೇತುವೆ ನಿರ್ಮಿಸಲು ಸುಮಾರು 90ಕೋಟಿ ರೂ.ಗಳಷ್ಟು ಹಣವನ್ನು ಬಜೆಟ್ನಲ್ಲಿ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪ್ರಸ್ತಾವನೆ ಸಲ್ಲಿಸಿದೆ. ಗ್ರಾಮೀಣ ಭಾಗಗಳಲ್ಲಿ ರಸ್ತೆ, ಶಿಕ್ಷಣ ಸೇರಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಪ್ರಮುಖರಾದ ಕೆ.ಷಣ್ಮುಖಪ್ಪ, ಹಬೀಬ್ ರೆಹಮಾನ್, ಸಣಾಪುರದ ರಘುರಾಮ್, ಕನಕಗಿರಿ ರೇಣುಕಪ್ಪ, ಹನುಮಂತಪ್ಪ, ಪಿ.ವೀರೇಶ್ಸ್ವಾಮಿ, ಗೌರಿಶಂಕರಸ್ವಾಮಿ, ನಾಯಕರ ವೆಂಕೋಬಾ, ಗುಜ್ಜಲ ದೊಡ್ಡ ನಾಯಕ, ದೊಡ್ಡ ಬಸವ, ಕೆ.ಮೌನೇಶ್, ಪಂಪಾಪತಿ, ಖಾಜಾ ಸೇರಿ ಕಾಂಗ್ರೆಸ್ ಕಾರ್ಯಕರ್ತರಿದ್ದರು.