ಕುಕನೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪ್ರಾಧಿಕಾರ ಮುಂದಾಗಿದ್ದು, ಜಿಪಿಎಸ್ ಸರ್ವೇ ಕಾರ್ಯ ಆರಂಭವಾಗಿದೆ.
ಪಟ್ಟಣದಲ್ಲಿ ಹಾದುಹೋಗಿರುವ ಭಾನಾಪುರ-ಗದ್ದಿನಕೇರಿ ರಾಷ್ಟ್ರೀಯ ಹೆದ್ದಾರಿ 367 ರಸ್ತೆಗೆ ಬೈಪಾಸ್ ನಿರ್ಮಿಸಲು ಭೂಸ್ವಾಧೀನಕ್ಕಾಗಿ ನೀಲಿನಕ್ಷೆ ಸಿದ್ಧಗೊಳ್ಳುತ್ತಿದೆ. ಪಟ್ಟಣದಲ್ಲಿ ನಿತ್ಯ ಭಾರಿ ವಾಹನ ಸಂಚಾರ ಓಡಾಡುತ್ತಿರುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಹೊರಭಾಗದಲ್ಲಿ ಬೈಪಾಸ್ ರಸ್ತೆ ಮಾಡುವುದರಿಂದ ಸುಗಮ ಸಂಚಾರಕ್ಕೆ, ವಾಣಿಜ್ಯ ವಹಿವಾಟಿಗೂ ಅನುಕೂಲವಾಗಲಿದೆ.
ಬೈಪಾಸ್ ಎಲ್ಲಿಂದ-ಎಲ್ಲಿವರೆಗೆ?: ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಹತ್ತಿರ ಇರುವ ಎಚ್ಪಿ ಪೇಟ್ರೊಲ್ ಬಂಕ್ ಮುಂಭಾಗದಿಂದ ಸುಮಾರು ನೂರಾರು ಎಕರೆ ರೈತರ ಜಮೀನಿನಲ್ಲಿ ಬೈಪಾಸ್ ರಸ್ತೆ ಹಾದು ರಾಜೂರು ರಸ್ತೆಗೆ ಸಂಪರ್ಕಿಸಲಿದೆ. ಈಗಾಗಲೇ ರಸ್ತೆ ಹಾದು ಹೋಗುವ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಪಿಎಸ್ ಮಾಡಿದ್ದಾರೆ. ಬೈಪಾಸ್ ರಸ್ತೆಗೆ ಕುಕನೂರು ಸೀಮಾ, ಹರಿಶಂಕರ ಬಂಡಿ, ರಾಜೂರು ಗ್ರಾಮದಲ್ಲಿ ನೂರಾರು ಎಕರೆ ಭೂಮಿ ಹೋಗಲಿದೆ. ಪಟ್ಟಣದ ಸಮೀಪ ಇರುವುದರಿಂದ ಭೂಮಿಗೆ ಬಂಗಾರದ ಬೆಲೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆಚ್ಚಿನ ಬೆಲೆಗೆ ಭೂಮಿ ಖರೀದಿಸಬೇಕು ಎಂಬ ಒತ್ತಾಯ ರೈತರದ್ದಾಗಿದೆ. ಇನ್ನೊಂದೆಡೆ ಹೆದ್ದಾರಿ ಹೊರ ಭಾಗದಿಂದ ಹೋಗುತ್ತದೆ ಎನ್ನುವ ನಕ್ಷೆ ಸಿದ್ಧಗೊಳ್ಳುತ್ತಿದ್ದಂತೆ ಕೆಲವರು ಹೆದ್ದಾರಿ ಪಕ್ಕದ ಜಮೀನು ಖರೀದಿಸುವ ಸಂಖ್ಯೆ ಕೂಡ ಹೆಚ್ಚಾಗಿದೆ.
ಭೂ ಮಾಪನ ಇಲಾಖೆಗೆ ಪೋಡಿ ನಕ್ಷೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದೆ. ಕುಕನೂರು ನೂತನ ತಾಲೂಕು ಆಗಿರುವುದರಿಂದ ಯಲಬುರ್ಗಾದಲ್ಲಿರುವ ಮಾಪನ ಇಲಾಖೆಯಿಂದ ಪೋಡಿ ನಕ್ಷೆ ದಾಖಲೆ ನೀಡಲಾಗುತ್ತಿದೆ. ಕುಕನೂರು ಬೈಪಾಸ್ ನಿರ್ಮಾಣಕ್ಕೆ ಜಿಪಿಎಸ್ ಮಾಡಲಾಗುತ್ತಿದೆ.
| ಚಿದಾನಂದ ಗುರುಸ್ವಾಮಿ ತಹಸೀಲ್ದಾರ್, ಕುಕನೂರು