ಹರೀಶ್ ಮೋಟುಕಾನ ಮಂಗಳೂರು
ಕೊಡಿಯಾಲ್ಬೈಲ್ನ ಕುದ್ಮುಲ್ ರಂಗರಾವ್ ಹೆಣ್ಮಕ್ಕಳ ವಸತಿ ನಿಲಯ ಹೊಸ ಕಟ್ಟಡ ಕಾಮಗಾರಿಗೆ ವೇಗ ನೀಡಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಸಮಾಜ ಕಲ್ಯಾಣ ಇಲಾಖೆ ಮುಂದಿದೆ.
ನೂತನ ಕಟ್ಟಡ ನಿರ್ಮಾಣಕ್ಕೆ ಏಪ್ರಿಲ್ನಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ಎಂಟು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಅಂತಸ್ತುಗಳ ವಸತಿ ನಿಲಯ ನಿರ್ಮಾಣವಾಗಲಿದೆ. ಶಂಕುಸ್ಥಾಪನೆ ನೆರವೇರಿಸಿದಾಗಿನಿಂದಲೇ ಕಾಮಗಾರಿಗೆ ವೇಗ ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ದೂರದ ಊರಿನ ವಿದ್ಯಾರ್ಥಿನಿಯರಿಗೆ ವಸತಿ, ಊಟದ ವ್ಯವಸ್ಥೆ ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿ 30 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ವಸತಿ ನಿಲಯ ಶಿಥಿಲಾವಸ್ಥೆಯಲ್ಲಿತ್ತು. ಈ ಹಿಂದೆ ಇದ್ದ ವಸತಿ ನಿಲಯ ಕಟ್ಟಡ ವಾಸಯೋಗ್ಯವಲ್ಲ ಎಂಬ ತಜ್ಞರ ವರದಿ ಬಳಿಕ ಇಲಾಖೆ, ಇಲ್ಲಿಂದ ವಿದ್ಯಾರ್ಥಿನಿಯರನ್ನು ಸ್ಥಳಾಂತರಿಸಲಾಗಿತ್ತು. ಪ್ರಸ್ತುತ ಹೊಸ ವಸತಿ ನಿಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ಮೇಲೇಳುತ್ತಿದೆ. ಜೂನ್ ತಿಂಗಳಲ್ಲಿ ವಸತಿ ನಿಲಯದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
800 ವಿದ್ಯಾರ್ಥಿನಿಯರಿಗೆ ಅವಕಾಶ: ನೂತನ ಕಟ್ಟಡದಲ್ಲಿ ಸುಮಾರು 800ರಷ್ಟು ವಿದ್ಯಾರ್ಥಿನಿಯರಿಗೆ ವಾಸ್ತವ್ಯಕ್ಕೆ ಅವಕಾಶವಿದೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತವೆ. ಬಳಿಕ ವಿದ್ಯಾರ್ಥಿನಿಯರ ಆಯ್ಕೆ ಮಾಡಿ ವಸತಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತುಗಳೂ ಇವೆ.
ಕುದ್ಮುಲ್ ರಂಗರಾವ್ ಹೆಣ್ಣು ಮಕ್ಕಳ ವಸತಿ ನಿಲಯದ ಕಾಮಗಾರಿ ಭರದಿಂದ ಸಾಗುತ್ತಿದೆ. ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಮುಂದಿನ ವರ್ಷದಿಂದ ವಿದ್ಯಾರ್ಥಿನಿಯರಿಗೆ ಇಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಸಿದ್ದಲಿಂಗೇಶ ಬೇವಿನಮತಿ
ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ