More

    ಮದ್ಯ ನಿಷೇಧಕ್ಕೆ ಹೊಸ ನೀತಿ ರಚಿಸಿ

    ಕೂಡಲಸಂಗಮ: ಜನರನ್ನು ಕಣ್ಣೀರಿನಲ್ಲಿಟ್ಟು ಅರ್ಥವ್ಯವಸ್ಥೆ ಸುಧಾರಣೆ ಮಾಡುವುದು ರಾಜ್ಯದ ನಿಜವಾದ ಅಭಿವೃದ್ಧಿಯಲ್ಲ. ಆರ್ಥಿಕ ಹೊರೆಯಾದರೂ ಜನರ ನೆಮ್ಮದಿ ಮುಖ್ಯ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಕರ್ನಾಟಕ ಮದ್ಯ ನಿಷೇದ ಆಂದೋಲನ ಹಾಗೂ ವಿವಿಧ 54 ಸಂಘಟನೆಗಳ ನೇತೃತ್ವದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಕೂಡಲಸಂಗಮದಲ್ಲಿ ಕಳೆದ 4 ದಿನ ನಡೆದ ಹೋರಾಟದ ಸಮಾರೋಪ ಸಮಾರಂಭದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿ, ಸುಖ, ಶಾಂತಿಗಾಗಿ ಕರ್ನಾಟಕದಲ್ಲಿ ಮದ್ಯಪಾನ ನಿಷೇಧಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಯ ಮಠಾಧೀಶರು, ಚಿಂತಕರು, ಹೋರಾಟಗಾರರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಕೂಡಲೇ ಕರೆದು ಮದ್ಯ ನಿಷೇಧದ ಹೊಸ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

    ಮದ್ಯಪಾನದಿಂದಲೇ ಅಧಿಕ ಅತ್ಯಾಚಾರ, ಅಪರಾಧ, ಅಪಘಾತವಾಗುತ್ತಿವೆ. ಬಿಹಾರ್, ಗುಜರಾತ್ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ್ದು, ಅಲ್ಲಿ ಯಾವುದೇ ಆರ್ಥಿಕ ತೊಂದರೆಯಾಗಿಲ್ಲ. ಮದ್ಯದಿಂದಲೇ ಅಧಿಕ ಹಣ ಬರುತ್ತದೆ ಎಂಬ ತಪ್ಪು ಕಲ್ಪನೆ ಬಿಟ್ಟು ಭ್ರಷ್ಟಾಚಾರದ ಮೂಲಗಳನ್ನು ಸರಿಯಾಗಿ ಹತ್ತಿಕ್ಕಬೇಕು. ಆಗ ಮದ್ಯಪಾನದಿಂದ ಬರುವ ಹಣಕ್ಕಿಂತ 100 ಪಟ್ಟು ಹಣ ಹೆಚ್ಚು ಬರುತ್ತದೆ. ಹೋರಾಟಗಾರರು ಮುಂದಿನ ಆಂದೋಲನವನ್ನು ಕನಕದಾಸರ ಕಾಗಿನೆಲೆ, ಶರೀಫರ್ ಶಿಶುನಾಳ, ಸಿದ್ಧಗಂಗಾ ಶ್ರೀಗಳ ತುಮಕೂರಿನಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ರಾಜ್ಯದ 20 ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ಹೋರಾಟಗಾರರು ಆಗಮಿಸಿದ್ದರು.

    ನಿರೀಕ್ಷೆ ಹುಸಿಗೊಳಿಸಿದ ಸಚಿವರು
    ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕಿ ಸ್ವರ್ಣ ಭಟ್ಟ ಮಾತನಾಡಿ, ಸರ್ಕಾರದ ಮಂತ್ರಿ ಮಂಡಲದ ಪರವಾಗಿ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಶ್ರೀರಾಮುಲು ಬರುವರು ಎಂಬ ಭರವಸೆ ಇಟ್ಟುಕೊಂಡಿದ್ದೇವು. ಬರದೆ ಇರುವುದು ನಿರಾಸೆ ಉಂಟುಮಾಡಿದೆ. ಮದ್ಯ ನಿಷೇಧ ಮಾಡುವವರೆಗೂ ಹೋರಾಟ ನಿರಂತರವಾಗಿ ಇರುವುದು. ನಾಡಿನ ವಿವಿಧ ಮಠಾಧೀಶರೊಂದಿಗೆ 15 ದಿನದೊಳಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆಗೆ ಅವಕಾಶ ಕೊಡುವಂತೆ ಕೇಳುತ್ತೇನೆ ಎಂದಿದ್ದಾರೆ. 15 ದಿನದೊಳಗೆ ಅವಕಾಶ ಸಿಗದೆ ಇದ್ದರೆ ಸಾತ್ವಿಕ ಹೋರಾಟ ಬಿಟ್ಟು ಸರ್ಕಾರ ಎಚ್ಚರಿಸುವ ಹೋರಾಟ ಮಾಡುವುದು ಅನಿವಾರ್ಯ. ಮುಂದಿನ ಹೋರಾಟಗಳು ರಾಷ್ಟ್ರೀಯ ಹೆದ್ದಾರಿ ತಡೆಯುವುದಾಗಿದೆ. ಈ ಕುರಿತು ಚರ್ಚಿಸಿ ಮುಂದಿನ ಹೋರಾಟದ ರೂಪುರೇಷ ಮಾಡಲಾಗುವುದು ಎಂದರು.

    ಸತ್ಯಾಗ್ರಹ ಮುಕ್ತಾಯ
    ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಹೊರ ಆವರಣದ ರಥ ಬೀದಿಯ ಕೃಷ್ಣಾ ನದಿ ದಡದಲ್ಲಿ ಸತ್ಯಾಗ್ರಹಿಗಳು ಗುರುವಾರ ಬೆಳಗ್ಗೆ 6 ರಿಂದ 9 ಗಂಟೆವರೆಗೆ ದೇವಾಲಯದ ಒಳ ಹಾಗೂ ಹೊರ ಆವರಣ, ನದಿ ದಡವನ್ನು ಸ್ವಚ್ಛಗೊಳಿಸಿ ಶ್ರಮದಾನ ಸತ್ಯಾಗ್ರಹ ಮಾಡಿದರು. ನಂತರ ವಿವಿಧ ವಿಷಯಗಳ ಕುರಿತು ಚಿಂತನ-ಮಂಥನ ನಡೆಸಿ ಮಧ್ಯಾಹ್ನ 2 ಗಂಟೆ ವೇಳೆಗೆ ಸಮಾರೋಪ ಸಮಾರಂಭದ ಮೂಲಕ ಸತ್ಯಾಗ್ರಹ ಮುಕ್ತಾಯಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts