ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ.
ಮುಂಜಾನೆಯಿಂದಲೇ ಯಾವುದೇ ಕೆಎಸ್ಆರ್ಟಿಸಿ ಬಸ್ಸುಗಳು ರಸ್ತೆಗೆ ಇಳಿಯದೆ ಮುಷ್ಕರ ನಡೆದಿದೆ. ಜಿಲ್ಲೆಯಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೋಗುವ ಎಲ್ಲಾ ಬಸ್ಸುಗಳು ಸ್ಥಗಿತಗೊಂಡಿದ್ದು ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದೆ. ಕೇರಳಕ್ಕೆ ಹೋಗುವ ಕೇರಳ ಕೆಎಸ್ಆರ್ಟಿಸಿ ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿವೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರ್ಕಾರ ಕೈಗೊಂಡ ನಿರ್ಧಾರದಂತೆ ಆರ್ಟಿಒ ಅನುಮತಿ ಪಡೆದು ಕೆಲವು ಖಾಸಗಿ ಬಸ್ಸುಗಳು ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಿಂದ ಮೈಸೂರು, ಬೆಂಗಳೂರಿಗೆ ಹೊರಟಿವೆ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲೂ ಕೆಎಸ್ಆರ್ಟಿಸಿ ಪೂರ್ಣ ಬಂದ್ ನಡೆಸಿದ್ದು ಜನಜೀವನಕ್ಕೂ ಒಂದಷ್ಟು ಸಮಸ್ಯೆ ಉಂಟಾಗಿದೆ.