ಚಿಕ್ಕಮಗಳೂರು: ಕೆಎಸ್ಆರ್ಟಿಸಿಯಿಂದ ನಗರ ಸಾರಿಗೆ ಸಂಚಾರ ಅರಂಭಿಸಿರುವುದರಿಂದ ಕಸಬಾ ಹೋಬಳಿ ಜನರ ಬಹು ವರ್ಷದ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟ ಭರವಸೆಯಂತೆ ಹಾಗೂ ನಗರದಲ್ಲಿ ಪ್ರವಾಸ ಕೈಗೊಂಡಾಗ ಸಾರ್ವಜನಿಕರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು 4 ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದರಿಂದ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಅನುಕೂಲವಾಗಿದೆ. ಈಗ ನಗರ ಸಾರಿಗೆ ಸಂಚಾರ ಆರಂಭಿಸಿರುವುದರಿಂದ ಎಲ್ಲ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ನಿಲ್ದಾಣದಿಂದ ಹಿರೇಮಗಳೂರು, ಕಲ್ಯಾಣ ನಗರ, ಎಐಟಿ, ಪವಿತ್ರವನ ಮಾರ್ಗವಾಗಿ ಬಸ್ ಸಂಚರಿಸಲಿದೆ. ಇನ್ನೊಂದು ಸಾರಿಗೆ ಬಸ್ ಮೂಗ್ತಿಹಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಪ್ರತಿ ದಿನ 40 ನಿಮಿಷಕ್ಕೊಮ್ಮೆ ಬಸ್ಗಳು ಸಂಚಾರ ನಡೆಸಲಿವೆ ಎಂದು ಮಾಹಿತಿ ನೀಡಿದರು.
ಬಸ್ ಸಂಚಾರದ ಕುರಿತು ಸಮಗ್ರ ಮಾಹಿತಿ ಇರುವ ನಾಮ ಫಲಕಗಳನ್ನು ಅಲ್ಲಲ್ಲಿ ಹಾಕುವ ಮೂಲಕ ವೇಳಾ ಪಟ್ಟಿ ನಿಗದಿಪಡಿಸಬೇಕು. ನಾಗರಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್ ಬಸವರಾಜ್ ಉಪಸ್ಥಿತರಿದ್ದರು.