ಬೆಂಗಳೂರು: ದೀಪಾವಳಿ ಹಬ್ಬ ದಪ್ರಯುಕ್ತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜೆಪಿನಗರದ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಘಟಕ ಹಿಟ್ ಅಂಡ್ ರನ್ ನಿಮ್ಮ ಕಾಯಕ ಆಗಿದ್ದು ನಿಮ್ಮ ಪಲಾಯನವಾದದ ಭಾಗವಲ್ಲವೇ ಎಂದು ಟೀಕಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ತಮ್ಮ ತಪ್ಪನ್ನು ಕೆಲಸದವರ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಕುಟೀಲ ಪ್ರಯತ್ನ ತಮ್ಮದು ಎಂದು ವ್ಯಂಗ್ಯವಾಡಿದೆ.
ಹೌದೌದು ಕುಮಾರಸ್ವಾಮಿಗಳೇ, ಬಿಡದಿ ಮನೆ, ಜೆ ಪಿ ನಗರದ ಮನೆ, ಆ ಮನೆ, ಈ ಮನೆ, ಯಾವ್ಯಾವ ಮನೆಯಲ್ಲಿ ಏನೇನಾಗುತ್ತಿದೆ ಎಂಬುದು ನಿಮಗೇ ತಿಳಿದಿರುವುದಿಲ್ಲ ಪಾಪ. ಅವರೇ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ತಾವು ಕರೆಂಟ್ ಕಳ್ಳತನವನ್ನು ಕ್ಷುಲ್ಲುಕ ವಿಚಾರ ಎಂದು ತಿಪ್ಪೆ ಸಾರಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು. ಹೀಗೆಯೇ ಇನ್ನೆಷ್ಟು ರಾಜ್ಯದ ಲೂಟಿಯನ್ನು ಕ್ಷುಲ್ಲುಕ ವಿಚಾರವೆಂದು ಸಮರ್ಥಿಸಿಕೊಳ್ಳುವಿರೋ ಏನೋ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಬಿಗ್ಬಾಸ್ನಲ್ಲಿ ಮತ್ತೊಂದು ಅವಾಂತರ; ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಪ್ರಕರಣ ದಾಖಲು
ತಮ್ಮ ತಪ್ಪನ್ನು ಕೆಲಸದವರ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಕುಟೀಲ ಪ್ರಯತ್ನ ತಮ್ಮದು, ಹಿಟ್ ಅಂಡ್ ರನ್ ನಿಮ್ಮ ಕಾಯಕ ಆಗಿದ್ದು ನಿಮ್ಮ ಪಲಾಯನವಾದದ ಭಾಗವಲ್ಲವೇ. ಮುಖ್ಯಮಂತ್ರಿಗಳ ಗೃಹ ಕಚೇರಿಯ 1.9 ಲಕ್ಷದ ಪೀಠೋಪಕರಣಗಳಿಗೆ 1.9 ಕೋಟಿ ಎಂದು ತಾವು ಸುಳ್ಳು ಆರೋಪ ಮಾಡಿದಾಗ ತಮ್ಮದು ಕ್ಷುಲ್ಲುಕ ಬುದ್ಧಿಯಾಗಿತ್ತೇ. ಗ್ಯಾರಂಟಿಗಳ ಬಗ್ಗೆ ರಾಜ್ಯದ ಜನತೆಗೆ ಸುಳ್ಳು ಸಂದೇಶ ಕೊಡುತ್ತಿದ್ದೀರಲ್ಲ, ಅದು ನಿಮ್ಮ ಕ್ಷುಲ್ಲುಕ ಬುದ್ಧಿಯೋ, ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿಯೋ ಎಂದು ಪ್ರಶ್ನಿಸಿದೆ.
ಅಂದಹಾಗೆ ತಾವು ಅಕ್ರಮ ಸಂಪರ್ಕ ಪಡೆದಾಗ ಕರ್ನಾಟಕ ಕತ್ತಲೆಯಲ್ಲಿ ಇರಲಿಲ್ಲ ಅಲ್ಲವೇ, ತಮ್ಮ ದೀಪಾಲಂಕಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ ಅಲ್ಲವೇ. ದೀಪಾಲಂಕಾರದ ಅದ್ದೂರಿತನ ತೋರುವಾಗ ರಾಜ್ಯದ ಬರ ನೆನಪಾಗಲಿಲ್ಲವೇ ತಮಗೆ ಯಾವುದಕ್ಕೂ ಬರ ಇಲ್ಲವೆಂದು ದಾಡಸಿತನವೇ ಎಂದು ರಾಜ್ಯ ಕಾಂಗ್ರೆಸ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.