ಕೊಪ್ಪಳ: ಜಿಲ್ಲಾದ್ಯಂತ ಸೋಮವಾರ ತಡರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ಸತತ ಮಳೆಯಿಂದಾಗಿ ಹೊಲಗದ್ದೆಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ಗಂಗಾವತಿ ಭಾಗದಲ್ಲಿ ಗದ್ದೆಗಳೆಲ್ಲ ಜಲಾವೃತವಾಗಿವೆ. ಚರಂಡಿಗಳು ತುಂಬಿಕೊಂಡಿವೆ. ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆ ಕಾರಣ ಶಾಲಾ, ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.
ಗಂಗಾವತಿ ತಾಲೂಕಿನ ಬೆಟ್ಟಕ್ಕೆ ಹೊಂದಿಕೊಂಡ ಕೆಲ ಗದ್ದೆಗಳಿಗೆ ಬೆಟ್ಟದಿಂದ ಅಪಾರ ನೀರು ಹರಿದು ಬಂದ ಕಾರಣ ನಾಟಿ ಮಾಡಿದ ಸಸಿಗಳು ಕಿತ್ತು ಹೋಗಿವೆ. ಯರಿ ಭಾಗದಲ್ಲಿ ಹೆಸರು ಬೆಳೆ ಮೊಳಕೆಯೊಡೆಯುತ್ತಿದೆ. ಅತಿಯಾದ ತೇವಾಂಶದಿಂದ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಕಾಟ ಶುರುವಾಗಿದ್ದು, ಅನ್ನದಾತರ ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ನಾಗರ ಪಂಚಮಿ ಹಬ್ಬವಿದ್ದು, ಮಳೆ ಕಾರಣ ಹಬ್ಬ ಆಚರಣೆಗೆ ಅಡಚಣೆಯಾಗಿದೆ.