ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕ ಭಾಗಕ್ಕೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲವೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಆರೋಪಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ 7.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ರೈತರು ಹೋರಾಟ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ. ಅವರ ಬೇಡಿಕೆ ಆಲಿಸದೇ ಕಾಲಹರಣ ಮಾಡುತ್ತಿದ್ದಾರೆ. ಹಲವು ರೈತರು ಸಾವನ್ನಪ್ಪಿದರೂ ಕರುಣೆ ತೋರುತ್ತಿಲ್ಲ. ರೈತ ವಿರೋಧಿ ಕಾನೂನು ಜಾರಿಗೊಳಿಸುತ್ತಿದ್ದು, ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲೂ ವಿರೋಧ ಪಕ್ಷದ ನಾಯಕರು ಅಭಿವೃದ್ಧಿ ಕೆಲಸಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ನೀರಾವರಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಅವರಿಗೆ ಅಧಿಕಾರ ಇದ್ದಾಗ ನೀರಾವರಿ ಯೋಜನೆಗಳು ಗಮನಕ್ಕೆ ಬರಲಿಲ್ಲ. ಆದರೆ, ನಾವು ಜಾರಿ ಮಾಡಿದ ಅಳವಂಡಿ-ಬೆಗಟೇರಿ ಏತ ನೀರಾವರಿ ಯೋಜನೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಯಲಬುರ್ಗಾದ ಕೆರೆ ತುಂಬಿಸಲು 298 ಕೋಟಿ ರೂ. ಅನುದಾನ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಜನಪರ ಕೆಲಸಗಳಾಗಬೇಕಾದರೆ ಅದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ ಚಳ್ಳೊಳ್ಳಿ, ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ವಾಲ್ಮೀಕಿ, ಉಪಾಧ್ಯಕ್ಷೆ ಶೃತಿ ಹೊಸಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ಪಾಷ, ಮುಖಂಡರಾದ ಪ್ರಸನ್ನ ಗಡಾದ, ಶರಣಪ್ಪ ಸಜ್ಜನ್, ಕೃಷ್ಣರೆಡ್ಡಿ ಗಲಬಿ, ಮುದಿಯಪ್ಪ ಆದೋನಿ, ಬಿಇಒ ಉಮಾದೇವಿ ಸೊನ್ನದ್, ಸಿಡಿಪಿಓ ರೋಹಿಣಿ ತಾಪಂ ಇಒ ಮಲ್ಲಿಕಾರ್ಜುನ ಇತರರಿದ್ದರು.