ಕೊಪ್ಪಳ: ಬೆಳಗಾವಿ ಗಡಿ ವಿವಾದ ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಪದಾಧಿಕಾರಿಗಳು ಗುರುವಾರ ಡಿಸಿ ಎಂ.ಸುಂದರೇಶ ಬಾಬು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭಾಷಾವಾರು ಪ್ರಾಂತ್ಯ ವಿಭಾಗದ ನಂತರ ಅನೇಕ ಕನ್ನಡ ಪ್ರದೇಶಗಳು ಮಹಾರಾಷ್ಟ್ರದಲ್ಲಿ ಉಳಿದುಕೊಂಡಿವೆ. ಹೀಗಿದ್ದರೂ ಅನಗತ್ಯವಾಗಿ ಬೆಳಗಾವಿ ವಿಚಾರವಾಗಿ ಎಂಇಎಸ್ ಪುಂಡರು ಗಲಾಟೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು, ಕನ್ನಡ ಸಂಘ, ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಮಹಾಜನ್ ವರದಿ ಸಹ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ತಿಳಿಸಿದೆ.ಆದರೂ, ಅಲ್ಲಿನ ಸರ್ಕಾರ, ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಆಗಾಗ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಗಡಿ ವಿವಾದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಕಾನೂನಿಗೆ ಗೌರವ ನೀಡದೆ ಸಂಘರ್ಷಕ್ಕಿಳಿದಿದ್ದಾರೆಂದು ಆರೋಪಿಸಿದರು.
ರಾಜ್ಯದಲ್ಲಿ ತಕ್ಷಣ ಎಂಇಎಸ್ ನಿಷೇಧಿಸಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲಿನ ದಾಳಿ ತಡೆಗೆ ಕಠಿಣ ಕ್ರಮ ಅನುಸರಿಸಬೇಕು. ಗೂಂಡಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಆಗ್ರಹಿಸಬೇಕೆಂದು ಒತ್ತಾಯಿಸಿದರು. ಕರವೇ ಜಿಲ್ಲಾಧ್ಯಕ್ಷ ಗಿರಿಶಾನಂದ ಜ್ಞಾನಸುಂದರ, ಉಪಾಧ್ಯಕ್ಷ ಶಿವನಗೌಡ ಹಲಗೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ, ತಾಲೂಕ ಕಾರ್ಯದರ್ಶಿ ಅಕ್ಬರ್ ಇತರರಿದ್ದರು.