ಕೊಪ್ಪಳ: ಕರೊನಾ ಬಗ್ಗೆ ಜನ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ತಹಸೀಲ್ದಾರ್ ಜೆ.ಬಿ.ಮಜ್ಗಿ ಸಲಹೆ ನೀಡಿದರು.
ಡಿಸಿ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕರೊನಾ ವೈರಸ್ ಜಾಗೃತಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಮಟ್ಟದಲ್ಲಿ ಈಗಾಗಲೇ ಕರೊನಾ ರೋಗದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಆರೋಗ್ಯ ಕಾಳಜಿ ಜತೆಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕೆಲಸ ಮಾಡಿದರೂ ತಕ್ಷಣವೇ ಮತ್ತು ಪದೇಪದೆ ಕೈ ತೊಳೆಯಬೇಕು. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತ ಡಾ.ಗಿರೀಶ ಪಾಟೀಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಸ್ತಿ, ಹ್ಯಾಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ, ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಡಾ. ಶ್ರೀನಿವಾಸ್, ಸದಸ್ಯರಾದ ಡಾ.ಸಿ.ಎಸ್.ಕರಮುಡಿ, ಸೋಮರೆಡ್ಡಿ ಅಳವಂಡಿ, ಸುಧೀರ್ ಅವರಾಧಿ, ಸಂತೋಷ ದೇಶಪಾಂಡೆ, ರಾಜೇಶ ಯಾವಗಲ್ ಇತರರು ಇದ್ದರು.