ಕೊಪ್ಪಳ: ದರೋಡೆ, ಕಳ್ಳತನ ಸೇರಿ ಯಾವುದೇ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡುವ ಪೊಲೀಸರು ಮೊದಲು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುತ್ತಾರೆ. ಆದರೆ, ಇಲ್ಲೊಂದು ಕಡೆ ಬ್ಯಾಂಕ್ ದರೋಡೆ ಮಾಡಿರುವ ಖದೀಮರು ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಹೊತ್ತೊಯ್ದಿರುವುದು ಪೊಲೀಸರಿಗೆ ತಲೆ ನೋವಾಗಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬೇವೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಬುಧವಾರ ರಾತ್ರಿ ಕನ್ನ ಹಾಕಿರುವ ದರೋಡೆಕೋರರ ಗ್ಯಾಂಗ್, ಗ್ಯಾಸ್ ಕಟ್ಟರ್ ಮೂಲಕ ಬ್ಯಾಂಕ್ನ ಕಬ್ಬಿಣದ ಶಟ್ಟರ್ ಕತ್ತರಿಸಿ ದರೋಡೆ ಮಾಡಿದೆ. ಬ್ಯಾಂಕ್ನಲ್ಲಿದ್ದ ನಗದು, ಗ್ರಾಹಕರು ಅಡಮಾನ ಇಟ್ಟಿರುವ ಚಿನ್ನಾಭರಣ ಸೇರಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದೆ.
ಇದನ್ನೂ ಓದಿ: ಎಸಿಪಿಯ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಕಂಡು ಎಸಿಬಿ ಅಧಿಕಾರಿಗಳೇ ಶಾಕ್…!
ಇಂದು ಬೆಳಗ್ಗೆ ಸಾರ್ವಜನಿಕರು, ಬ್ಯಾಂಕ್ ಬಾಗಿಲು ಕತ್ತರಿಸಿರೋದನ್ನು ನೋಡಿ ಮ್ಯಾನೇಜರ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ರವಿ ಪೊಲೀಸರಿಗೆ ಮಾಹಿತಿ ನೀಡಿ, ಅಧಿಕಾರಿಗಳ ಸಮೇತ ಬ್ಯಾಂಕ್ಗೆ ಬಂದಿದ್ದಾರೆ. ಬಂದ ಕೂಡಲೇ ಸಿಸಿ ಕ್ಯಾಮೆರಾ ನೋಡಿರುವ ಪೊಲೀಸರಿಗೆ ಖದೀಮರು ಶಾಕ್ ಕೊಟ್ಟಿದ್ದಾರೆ. ದರೋಡೆಕೋರರು ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಅನ್ನೂ ಕದ್ದೊಯ್ದಿದ್ದಾರೆ.
ಕೊಪ್ಪಳ ಜಿಲ್ಲೆಯ ಮಟ್ಟಿಗೆ ಇದು ದೊಡ್ಡ ದರೋಡೆ ಪ್ರಕರಣ ಎಂದೇ ಹೇಳಬಹುದು. ಇನ್ನು ಖದೀಮರು ಪೊಲೀಸರ ತನಿಖೆಗೆ ಒಂದಷ್ಟು ಸಹಾಯ ಆಗಬಲ್ಲ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಲಪಟಾಯಿಸಿರುವುದು ತನಿಖಾಧಿಕಾರಿಗಳಿಗೆ ಪ್ರಕರಣದ ಆರೋಪಿಗಳ ಪತ್ತೆ ಸವಾಲಾಗಿದೆ. (ದಿಗ್ವಿಜಯ ನ್ಯೂಸ್)
ಮಹಿಳೆಗೆ ಸೇರಿದ ಕಾರ್ಖಾನೆಯಲ್ಲಿತ್ತು 3 ಲಕ್ಷಕ್ಕೂ ಹೆಚ್ಚು ಕಾಂಡೋಮ್: ಭಯಾನಕ ಜಾಲ ಭೇದಿಸಿದ ಪೊಲೀಸರು!