ಮಸ್ಕಿ: ಬಳಗಾನೂರು ಪೊಲೀಸ್ ಠಾಣೆ ಪೇದೆಗಳಿಬ್ಬರ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ವಾಲ್ಮೀಕಿ ವೃತ್ತಕ್ಕೆ ಎಸ್ಪಿ ಬಿ.ನಿಖಿಲ್, ಹೆಚ್ಚುವರಿ ಎಸ್ಪಿ ಶಿವಕುಮಾರ ಮಂಗಳವಾರ ಪ್ರತ್ಯೇಕವಾಗಿ ಭೇಟಿ ನೀಡಿ ವಿಚಾರಣೆ ನಡೆಸಿದರು.
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಮೇರೆಗೆ ಪೊಲೀಸರು ವಿಚಾರಣೆಗೆ ತೆರಳಿದ್ದ ಪೇದೆಗಳಾದ ಮಂಜುನಾಥ ಮತ್ತು ಗೋಪಾಲ ಮೇಲೆ ನಾಲ್ಕೈದು ಜನರ ಗುಂಪು ಸೋಮವಾರ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ, ಬಳಗಾನೂರು ಠಾಣೆ, ಹಸಮಕಲ್ ಗ್ರಾಮ ಹಾಗೂ ಪಟ್ಟಣದ ವಾಲ್ಮೀಕಿ ವೃತ್ತಕ್ಕೆ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್ಪಿ ಶಿವಕುಮಾರ, ಶಿಕ್ಷಣ ಇಲ್ಲದಿರುವುದು ಹಾಗೂ ಕಾನೂನಿನ ತಿಳಿವಳಿಕೆ ಕೊರತೆಯಿಂದ ಪೊಲೀಸರ ಮೇಲೆ ಹಲ್ಲೆಯಂತಹ ಘಟನೆ ನಡೆಯುತ್ತವೆ. ಈ ಬಗ್ಗೆ ಆರು ಜನರ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಸಿಂಧನೂರು ಗ್ರಾಮೀಣ ಸಿಪಿಐ, ಇಬ್ಬರು ಪಿಎಸ್ಐಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ ಎಂದರು.