ಧಾರವಾಡ: ಸಮಾಜದ ಪ್ರಗತಿಗೆ ಮಠಗಳ ಕೊಡುಗೆ ಅನನ್ಯ. ಮಠಾಧೀಶರು ಕನ್ನಡ ಉಳಿಸಿ ಬೆಳೆಸಿದರು. ಸದೃಢ ಸಮಾಜ ನಿರ್ಮಾಣದಲ್ಲಿ ಮಠಗಳ ಹಾಗೂ ಮಠಾಧೀಶರ ಪಾತ್ರ ಹಿರಿದು ಎಂದು ಶಿಕ್ಷಣ ತಜ್ಞ ಹಾಗೂ ಸಾಹಿತಿ ಬಿ.ಎಸ್. ಗವಿಮಠ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯ, ಆರ್ಎಲ್ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಬಿಬಿಎ ಮತ್ತು ಬಿಸಿಎ ಕಾಲೇಜುಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೆ.ಎಲ್.ಇ ಸಂಸ್ಥೆಯ 108ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಲ್ಇ ಸಪ್ತರ್ಷಿಗಳು ಬಡತನವನ್ನು ಹಾಸಿ ಹೊದ್ದು ಬದುಕಿದವರು. ಅವರ ಬದುಕಿಗೆ, ವ್ಯಕ್ತಿತ್ವಕ್ಕೆ ಹೋಲಿಕೆ ಎನ್ನುವುದಿಲ್ಲ. ಅವರು ಕೆಎಲ್ಇ ಉದಯಕ್ಕೆ ಮಾತ್ರವಲ್ಲ, ಕರ್ನಾಟಕದ ಉದಯಕ್ಕೂ ಕಾರಣೀಭೂತರು. ಉತ್ತರ ಕರ್ನಾಟಕ ಶೈಕ್ಷಣಿಕ ಇತಿಹಾಸವನ್ನು ತಿಳಿಯಲು ಅರಟಾಳ ರುದ್ರಗೌಡರ ಚರಿತ್ರೆ ಮತ್ತು ಕೆಎಲ್ಇ ಚರಿತ್ರೆ ಕೃತಿಗಳನ್ನು ಓದಬೇಕು ಎಂದರು.
ಮೃತ್ಯುಂಜಯ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ವೈ.ಪಿ. ಮದ್ನೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಡಾ. ನೀಲಕ್ಕ ಸಿ. ಪಾಟೀಲ ಸ್ವಾಗತಿಸಿದರು. ಆರ್.ಎಲ್.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.ವಿ. ಕಣಬರ್ಗಿ ಪರಿಚಯಿಸಿದರು. ಪ್ರೊ. ಶಶಾಂಕಾ ಹಾದಿಮನಿ ನಿರೂಪಿಸಿದರು. ಮೃತ್ಯುಂಜಯ ಶೆಟ್ಟರ ವಚನಗಾಯನ ಪ್ರಸ್ತುತಪಡಿಸಿದರು. ಆರ್.ಎಲ್.ಎಸ್. ಪ್ರೌಢಶಾಲಾ ವಿದ್ಯಾರ್ಥಿನಿಯರು ಸಂಸ್ಥಾಪನಾ ಗೀತೆ ಪ್ರಸ್ತುತಪಡಿಸಿದರು. ಉಪ ಪ್ರಾಚಾರ್ಯ ವಿ.ಪಿ. ಹಿರೇಮಠ ವಂದಿಸಿದರು.