ಬೆಂಗಳೂರು: ಬಾಗಲೂರಿನಲ್ಲಿ ಅನೈತಿಕ ಸಂಬಂಧದ ವಿಚಾರವಾಗಿ ನಾಲ್ವರು ದುಷ್ಕರ್ವಿುಗಳು ಯುವಕನನ್ನು ಅಪಹರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ನಿವಾಸಿ ಮಸೀನ್ (27) ಹತ್ಯೆಯಾದ ಯುವಕ. ಪ್ರಕರಣದಲ್ಲಿ ಶಾಮೀಲಾದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ಭಾರತಿನಗರ ನಿವಾಸಿ ಫರ್ವೆಜ್ಗಾಗಿ ಶೋಧ ನಡೆಯುತ್ತಿದೆ. ಅನೈತಿಕ ಸಂಬಂಧ ವಿಚಾರಕ್ಕೆ ಹತ್ಯೆ ನಡೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.16ರಂದು ರಾತ್ರಿ 8 ಗಂಟೆಗೆ ಶಿವಾಜಿನಗರದ ಇಂದಿರಾ ಕ್ಯಾಂಟೀನ್ ಬಳಿ ನಿಂತಿದ್ದ ಮಸೀನ್ನನ್ನು ಫರ್ವೆಜ್ ಮತ್ತು ಆತನ ಸಹಚರರು ಕಾರಿನಲ್ಲಿ ಅಪಹರಿಸಿದ್ದರು. ನಂತರ ಬಾಗಲೂರಿನ ಕಾಡುಸೊಣ್ಣಪ್ಪನಹಳ್ಳಿಯ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಆತನಿಗೆ ಚಿತ್ರಹಿಂಸೆ ನೀಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಭಾನುವಾರ ಬೆಳಗ್ಗೆ ದಾರಿಹೋಕರು ಮಸೀನ್ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಗಲೂರು ಠಾಣೆಯಿಂದ ಪ್ರಕರಣ ಶಿವಾಜಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.