ಕಾನಹೊಸಹಳ್ಳಿ: ವರುಣನ ಕೃಪೆಗಾಗಿ ಸಮೀಪದ ಚೌಡಾಪುರದಲ್ಲಿ ಮಕ್ಕಳಿಂದ ಗುಲಕಮ್ಮ ಆಚರಣೆ ಮಾಡಲಾಗುತ್ತಿದೆ. ಮಣ್ಣಿನಿಂದ ತಯಾರಿಸಿದ ಗುಲಕಮ್ಮನ ಮೂರ್ತಿಯನ್ನು ತಲೆಮೇಲೆ ಹೊತ್ತು ಪ್ರತಿ ಮನೆಗೆ ತೆರಳಿ ನೀರು ಹಾಕಿಸಿಕೊಳ್ಳುವ ಸಂಪ್ರದಾಯ ಏಳು ದಿನಗಳ ಕಾಲ ನಡೆಯಲಿದೆ. ಮಣ್ಣಿನ ಕುಲಕಮ್ಮನ ಮೂರ್ತಿ ಹೊತ್ತು ಸಾಗುವ ಮಕ್ಕಳ ತಂಡ, ಪ್ರತಿ ಮನೆಯ ಮುಂದೆ ನಿಂತು ಗುಲಕವ್ವ ಗುಲಕವ್ವ ಎಲ್ಲಿಂದ ಬಂದೆ, ನೀರಿಯಿದ್ದುತ್ತಾಗೆ ನಿಂತಾಡಿ ಬಂದೆ, ಕೆಸರುಯಿದ್ದತ್ತಾಗೆ ಕೊಸರಾಡಿ ಬಂದೆ, ಆಡೋ ಮಕ್ಕಳನ್ನು ಅಡವಿಗೆ ಕಳಿಸಿ, ಉಂಬೋ ಮಕ್ಕಳನ್ನು ಕಂಬಕ್ಕೆ ಕಟ್ಟಿ, ಸುರಿಯೋ ಸುರಿಯೋ ಮಳೆರಾಯ…ಎಂಬಿತ್ಯಾದಿ ಹಾಡು ಹೇಳಿ ಗೃಹಿಣಿಯರಿಂದ ತಲೆ ಮೇಲೆ ನೀರು ಹಾಕಿಸಿಕೊಳ್ಳುತ್ತಾರೆ. ಈ ರೀತಿಯ ಆಚರಣೆಯಿಂದ ಮಳೆ ಬರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.