ಅಥಣಿ ಗ್ರಾಮೀಣ: ನಮ್ಮ ಸಂಸ್ಕೃತಿ, ಉತ್ಸವಗಳಲ್ಲಿ ದೈವತ್ವ ಉಳಿಸುವ ಮಹತ್ತರ ಉದ್ದೇಶಗಳಿವೆ ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಬಸವೇಶ್ವರ ಮೂರ್ತಿ ಹಾಗೂ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ಮೆರವಣಿಗೆ, ಕುಂಭಮೇಳ ಮತ್ತು ಆರತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪೂಜೆಗಿಂತ ಕಾಯಕ ಶ್ರೇಷ್ಠ. ಸಿರಿವಂತಿಕೆಗಿಂತ ನೆಮ್ಮದಿ ಬದುಕು ಪರಮ ಶ್ರೇಷ್ಠ. ಜೀವನದ ವೌಲ್ಯ ಹೆಚ್ಚಲು ಸತ್ಯ, ಶುದ್ಧ ಕಾಯಕ ಮಾಡಬೇಕು. ಗುರು-ಹಿರಿಯರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯಬೇಕು ಎಂದರು.
ಆನೆ, ಕುದುರೆ, ಒಂಟೆ, ಝಾಂಜ್ ಪಥಕ, ಹಗಲುವೇಷಧಾರಿಗಳ ಮೆರವಣಿಗೆಯಲ್ಲಿ ಸಕಲ ವಾದ್ಯಮೇಳದೊಂದಿಗೆ ಕುಂಭ ಹಿಡಿದು ಸುಮಂಗಲೆಯರು ಮತ್ತು ಭಕ್ತರು ಹೆಜ್ಜೆ ಹಾಕಿದರು.ಸೆ.15ರಂದು ಬೆಳಗ್ಗೆ 11 ಸಾವಿರ ಲಿಂಗ ಪೂಜೆ, ಮಧ್ಯಾಹ್ನ ಪ್ರವಚನ ಕಾರ್ಯಕ್ರಮ ಸಮಾರೋಪ ಜರುಗಲಿದೆ. ಭೀಮಪ್ಪ ದೇಶಿಂಗೆ, ಸಂಗಪ್ಪ ಜಾಬಗೌಡರ, ಓಂಪ್ರಕಾಶ ಡೊಳ್ಳಿ, ಮತ್ಯುಂಜಯ ಹಿರೇಮಠ, ಶಿವಾನಂದ ಪಾಟೀಲ, ರಾಮು ದೇಶಿಂಗೆ, ಮುರಗೆಪ್ಪ ಮಾಳಿ, ಸುರೇಶ ಬಡಿಗೇರ, ರೇವಣಸಿದ್ಧ ನಕಾತೆ, ಮಹೇಶ ಹಳ್ಯಾಳ, ಸಿದ್ದಯ್ಯ ಮಠಪತಿ, ಕಲ್ಲಪ್ಪ ಗೊಂದಳಿ, ಸಿದ್ದರಾಮ ಮೇತ್ರಿ, ಶಿವಾನಂದ ಖೋತ, ಗುರುಲಿಂಗಯ್ಯ ಮಠಪತಿ ಇತರರಿದ್ದರು.