ಉಡುಪಿ: ಮುಂದಿನ ಪೀಳಿಗೆಗೆ ಕನ್ನಡ ಉಳಿಸಿ ಬೆಳೆಸುವ ಕೆಲಸ ಇಂದಿನ ಅಗತ್ಯವಾಗಿದ್ದು, ಆಂಗ್ಲಪದಗಳಲ್ಲಿ ಕನ್ನಡ ಹಾಡನ್ನು ಬರೆದು ಹಾಡುವ ಪರಿಸ್ಥಿತಿ ಬದಲಾಗಬೇಕು. ಮಕ್ಕಳಿಗೆ ಕನ್ನಡ ಓದಿ ಬರೆಯಲು ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಸಹಕಾರದಲ್ಲಿ ಕಸಾಪ 110ನೇ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಸಾಪ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ದತ್ತಿ ನಿಧಿ ಸ್ಥಾಪಿಸಿದ್ದು, ಪ್ರತಿ ವರ್ಷ ಸಾಹಿತ್ಯ ಕ್ಷೇತ್ರದ ಸಾಧಕರಿಗೆ 10,00,001 ರೂ ಮೌಲ್ಯದ ನೃಪತುಂಗ ಪ್ರಶಸ್ತಿ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಕಸಾಪ ಸದಸ್ಯರಾಗುವ ಮೂಲಕ ಕನ್ನಡ ಸೇವೆ ಮಾಡಬೇಕು. ಕಾಲೇಜುಗಳಲ್ಲಿ ಕಸಾಪ ಟಕ ಪ್ರಾರಂಭಿಸಬೇಕು ಎಂದು ಹೇಳಿದರು.
ಡಾ. ಕೋಟ ಶಿವರಾಮ ಕಾರಂತ ದತ್ತಿ ಉಪನ್ಯಾಸ ನೀಡಿದ ಸಾಹಿತಿ ಡಾ. ನಿಕೇತನ, ಕಾರಂತರ ಕೃತಿಗಳು ಓದುಗರನ್ನು ಸಹೃದಯಿಗಳನ್ನಾಗಿ ಮಾಡುತ್ತದೆ. ವೈಚಾರಿಕ ದೃಷ್ಟಿಕೋನ ಬೆಳೆಸುತ್ತದೆ. ಪದವೀಧರರು ವಿದ್ಯಾವಂತರೆನಿಸಿಕೊಳ್ಳುವುದಿಲ್ಲ. ವಿದ್ಯೆಯ ಜೊತೆಗೆ ವಿವೇಕ ಮೂಡಲು ಸಾಹಿತ್ಯ ಓದಬೇಕು. ಬದುಕನ್ನು ಸಂಭ್ರಮಿಸಬೇಕಾದರೆ ವರ್ತಮಾನದಲ್ಲಿ ಜೀವಿಸಬೇಕು. ಇದರಿಂದ ವ್ಯಕ್ತಿ ಶಕ್ತಿಯಾಗಲು ಸಾಧ್ಯ. ಸಣ್ಣ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುವ ಎಳೆ ಮನಸ್ಸುಗಳು ಕಾರಂತರ ಕೃತಿಗಳನ್ನು ಓದಿದರೆ ಅಂಥ ಆಲೋಚನೆಗಳೇ ಹುಟ್ಟುಕೊಳ್ಳುವುದಿಲ್ಲ. ಬದುಕಿನ ಅನನ್ಯತೆ ಅರಿವಾಗುತ್ತದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಆಯುಷ್ ಕೇಂದ್ರದ ವೈದ್ಯೆ ಡಾ. ಸ್ವಾತಿ ಶೇಟ್ ಉಪನ್ಯಾಸ ನೀಡಿದರು. ಯುಪಿಎಂಸಿ ಪ್ರಾಂಶುಪಾಲೆ ಪ್ರೊ. ಅಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವಸಂಸತಿ ಪ್ರತಿಷ್ಠಾನ ಅಧ್ಯಕ್ಷ ವಿಶ್ವನಾಥ ಶೆಣೈ, ಬೈಂದೂರು ಕಸಾಪ ತಾಲೂಕು ಅಧ್ಯಕ್ಷ ರು ನಾಯ್ಕ, ಕಸಾಪದ ಗೌರವ ಕಾರ್ಯದರ್ಶಿ ರಂಜನಿ ವಸಂತ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಕೊಡವೂರು ಸ್ವಾಗತಿಸಿ, ರಾವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.