ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ದತ್ತಿ ಪ್ರಶಸ್ತಿ’ಗೆ ಬರಹಗಾರರಾದ ಕೊಡಗು ಜಿಲ್ಲೆಯ ಕುಶಾಲನಗರದ ಹಂಚೆಟ್ಟರ ಫ್ಯಾನ್ಸಿ ಮುತ್ತಣ್ಣ ಮತ್ತು ಕೋಲಾರ ಜಿಲ್ಲೆಯ ಅಮರೇಂದ್ರ ಹೊಲ್ಲಂಬಳ್ಳಿ ಆಯ್ಕೆಯಾಗಿದ್ದಾರೆ.
ಮೈಸೂರಿನ ಎ. ಪುಷ್ಪಾ ಅಯ್ಯಂಗಾರ್ ಈ ದತ್ತಿ ಸ್ಥಾಪಿಸಿದ್ದು, ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ನೇತೃತ್ವದ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.
ಹಂಚೆಟ್ಟರ ಫ್ಯಾನ್ಸಿ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳಾ ಸಮಸ್ಯೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ್ದಾರೆ. ‘ಕಾಡು ಹಕ್ಕಿಯ ಹಾಡು’, ‘ಕಾಡಿದ ನೆನಪುಗಳು’, ‘ಕನವರಿಕೆ’, ‘ಒಡಲ ಉರಿ’ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅಮರೇಂದ್ರ ಹೊಲ್ಲಂಬಳ್ಳಿ ಅವರು ಕಥೆ, ನಾಟಕ, ಕಾದಂಬರಿ, ವಿಮರ್ಶೆ ಸೇರಿ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ಬರೆದಿದ್ದಾರೆ. ‘ವಾಲ್ ಪೇಪರ್‘ ‘ಬಣ್ಣದ ನೆರಳು’, ‘ಕಾಯ’ ಮತ್ತು ‘ಚಂದ್ರಗುಪ್ತ’ ಅವರ ಪ್ರಮುಖ ಕೃತಿಗಳು ಎಂದು ಕಸಾಪ ತಿಳಿಸಿದೆ.