More

    ಹ್ಯಾರಿಸ್‌ ಪರವಾಗಿ ಕೆಎಎಸ್‌ ಅಧಿಕಾರಿಯಿಂದ ಬೆದರಿಕೆ ಕರೆ: ಆಡಿಯೋ ಬಿಡುಗಡೆ ಮಾಡಿದ ಕೆ.ಮಥಾಯಿ

    ಬೆಂಗಳೂರು: ಶಾಸಕ ಎನ್‌.ಎ.ಹ್ಯಾರಿಸ್‌ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಕೆಎಎಸ್‌ ಅಧಿಕಾರಿ ಎಲಿಶ ಆ್ಯಂಡ್ರಿವ್ಸ್‌ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸದಂತೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಕೆ.ಮಥಾಯಿ ಆರೋಪಿಸಿದರು.

    ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಮಥಾಯಿ ಅವರು ಎಲಿಶ ಆ್ಯಂಡ್ರಿವ್ಸ್‌ ಬೆದರಿಕೆ ಹಾಕಿರುವ ಆಡಿಯೋ ಬಿಡುಗಡೆ ಮಾಡಿದರು. ಎಲಿಶ ಆ್ಯಂಡ್ರಿವ್ಸ್‌ ಎಂಬ ಕೆಎಎಸ್‌ ಅಧಿಕಾರಿ ಜನವರಿ 13ರ ಬೆಳಗ್ಗೆ 9 ಗಂಟೆಗೆ ನನ್ನ ಮೊಬೈಲ್‌ ಕರೆ ಮಾಡಿದರು. ಸುಮಾರು 15 ನಿಮಿಷ ಮಾತನಾಡಿದ ಅವರು ಶಾಸಕ ಎನ್‌.ಎ.ಹ್ಯಾರಿಸ್‌ ಹೆಸರನ್ನು ಹಲವು ಬಾರಿ ಉಲ್ಲೇಖಿಸಿ, ಅವರ ಪರವಾಗಿ ಮಾತನಾಡಿದ್ದಾರೆ. ಶಾಂತಿನಗರ ಕ್ಷೇತ್ರದಿಂದ ನಾನು ಸ್ಪರ್ಧಿಸಬಾರದೆಂದು ಒತ್ತಡ ಹೇರಿದ್ದಲ್ಲದೇ, ಇದಕ್ಕೆ ಒಪ್ಪದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾರೆ. ಶಾಸಕರು ಚುನಾವಣಾ ಸೋಲಿನ ಭೀತಿಯಲ್ಲಿ ಈ ರೀತಿ ಅಧಿಕಾರಿಗಳಿಂದ ಕರೆ ಮಾಡಿಸುತ್ತಿರುವುದು ದುರಂತ ಎಂದರು.

    ಕರ್ನಾಟಕ ಸರ್ಕಾರ ಹಾಗೂ ಭಾರತ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿಗಳು ಯಾವುದೇ ಪಕ್ಷದ ಯಾವುದೇ ವ್ಯಕ್ತಿಯ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ನಿಷಿದ್ಧ. ಆದ್ದರಿಂದ ಎಲಿಶ ಆ್ಯಂಡ್ರಿವ್ಸ್‌ ವಿರುದ್ಧ ಇಲಾಖಾ ತನಿಖೆ ನಡೆಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಇಂತಹ ಬೆದರಿಕೆಗಳಿಗೆ ಹೆದರಿ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಇಡೀ ಜೀವನವನ್ನು ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಮುಡಿಪಾಗಿಟ್ಟಿದ್ದು, ಇದೇ ಸಿದ್ಧಾಂತ ಹೊಂದಿರುವ ಆಮ್‌ ಆದ್ಮಿ ಪಾರ್ಟಿಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಕೆ.ಮಥಾಯಿ ಹೇಳಿದರು.

    ಶಾಸಕ ಹ್ಯಾರಿಸ್‌ರವರು ಕ್ಷೇತ್ರದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಸರ್ಕಾರಿ ನಿವೇಶನಗಳು ಹಾಗೂ ಪಾರ್ಕ್‌ಗಳನ್ನು ಅತಿಕ್ರಮಣ ಮಾಡಿಕೊಂಡ ಶಾಸಕರು ಅವುಗಳನ್ನು ರಿಯಲ್‌ ಎಸ್ಟೇಟ್‌ ಆಗಿ ಪರಿವರ್ತಿಸಿಕೊಂಡಿದ್ದಾರೆ. ಡ್ಯಾನ್ಸ್‌ ಬಾರ್‌ಗಳು ಶಾಂತಿನಗರದ ಶಾಂತಿಗೆ ಭಂಗ ತರುತ್ತಿದೆ. ಡ್ರಗ್‌ ಮಾಫಿಯಾದಿಂದ ಇಲ್ಲಿನ ಯುವಕರ ಆರೋಗ್ಯ ಹಾಳಾಗುತ್ತಿದೆ ಎಂದು ಕೆ.ಮಥಾಯಿ ಹೇಳಿದರು.

    ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಜಾಮೀನು ಮೇಲೆ ಹೊರಬಂದ ಕಣ್ಣೂರು ಮಠದ ಶ್ರೀಗಳಿಗೆ ಅದ್ದೂರಿ ಸ್ವಾಗತ

    3 ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕಟ್ಟೆ! ತುರುವೇಕೆರೆಯಲ್ಲಿ ದುರ್ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts