More

    ಬಾಲ್ಯ ವಿವಾಹದಲ್ಲಿ ರಾಜ್ಯ ನಂ.1: 2020ರಲ್ಲಿ 184 ಕೇಸ್ ಬೆಳಕಿಗೆ, ಕರೊನಾ ಲಾಕ್​ಡೌನ್ ಬಳಿಕ ಹೆಚ್ಚಿದ ಪ್ರಕರಣ..

    | ಅವಿನಾಶ ಮೂಡಂಬಿಕಾನ ಬೆಂಗಳೂರು

    ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತ ಮುನ್ನಡೆಯುತ್ತಿರುವ ಹೆಣ್ಣುಮಕ್ಕಳು ಹೆತ್ತವರಿಗೆ ಮಾತ್ರ ಭಾರ ಎಂಬ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಕಾನೂನುಬದ್ಧ ನಿರ್ದಿಷ್ಟ ವಯಸ್ಸಿಗೂ ಮೊದಲೇ ಹೆಣ್ಣುಮಕ್ಕಳನ್ನು ಸಂಸಾರದ ನೌಕೆ ಹತ್ತಿಸುವ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಹೆಚ್ಚುತ್ತಿರುವುದು ಒಂದೆಡೆಯಾದರೆ, ಇಂತಹ ಪ್ರಕರಣಗಳಲ್ಲಿ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. 2020ರಲ್ಲಿ ರಾಜ್ಯಾದ್ಯಂತ 184 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್​ಸಿಆರ್​ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಈ ಮಾಹಿತಿ ಬಯಲಾಗಿದೆ. ದೇಶದಲ್ಲಿ ಕಳೆದ 3 ವರ್ಷಗಳಲ್ಲಿ 1,809 ಚೈಲ್ಡ್ ಮ್ಯಾರೇಜ್ ಪ್ರಕರಣಗಳು ಬೆಳಕಿಗೆ ಬಂದಿವೆ. ಕರೊನಾ ಬರುವುದಕ್ಕೂ ಮುನ್ನ ಮತ್ತು ನಂತರಕ್ಕೆ ಹೋಲಿಸಿದರೆ ಕೋವಿಡ್ ಲಾಕ್​ಡೌನ್ ಜಾರಿಯಾದ ವೇಳೆ ಶೇ.50 ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದೆ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ಆಯಾ ಕೌಟುಂಬಿಕ ಚೌಕಟ್ಟಿನಲ್ಲೇ ಗೌಪ್ಯವಾಗಿ ಮುಗಿದುಹೋಗುತ್ತದೆ. ಶೇ.50 ಪ್ರಕರಣ ಠಾಣೆ ಮೆಟ್ಟಿಲೇರುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

    ವರ್ಷದಿಂದ ವರ್ಷಕ್ಕೆ ಹೆಚ್ಚಳ: 2018ರಲ್ಲಿ ದೇಶಾದ್ಯಂತ 501 ಕೇಸ್ ದಾಖಲಾದರೆ, 2019ರಲ್ಲಿ 523 ಹಾಗೂ 2020ರಲ್ಲಿ 785 ಪ್ರಕರಣ ವರದಿ ಯಾಗಿವೆ. ಠಾಣೆ ಮೆಟ್ಟಿಲೇರಿದ ಕೇಸ್​ಗಳ ಪೈಕಿ 1,174 ಪ್ರಕರಣ ತನಿಖಾ ಹಂತದಲ್ಲಿದ್ದರೆ, 389 ಪ್ರಕರಣ ತನಿಖೆಗೆ ಬಾಕಿ ಇವೆ. 2092 ಪ್ರಕರಣಗಳು ಕೋರ್ಟ್ ವಿಚಾರಣಾ ಹಂತದಲ್ಲಿದೆ. ಕರ್ನಾಟಕದಲ್ಲಿ 2018ರಲ್ಲಿ ಕೇವಲ 73 ಕೇಸ್ ಠಾಣೆ ಮೆಟ್ಟಿಲೇರಿದರೆ, 2019ರಲ್ಲಿ 111ಕ್ಕೆ ಏರಿಕೆಯಾಗಿತ್ತು. 2020ರಲ್ಲಿ ಇದರ ಪ್ರಮಾಣ 184ಕ್ಕೆ ಹೆಚ್ಚಳವಾಗಿ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಅಸ್ಸಾಂನಲ್ಲಿ 138 ಕೇಸ್ ದಾಖಲಾಗಿದ್ದು, 2ನೇ ಸ್ಥಾನದಲ್ಲಿದೆ. ಪ.ಬಂಗಾಳ-98, ತಮಿಳುನಾಡು-77, ತೆಲಂಗಾಣ-60, ಮಹಾರಾಷ್ಟ್ರದಲ್ಲಿ 50 ಎಫ್​ಐಆರ್​ಗಳು ದಾಖಲಾಗಿದ್ದು, ಇವುಗಳು ನಂತರದ ಸ್ಥಾನದಲ್ಲಿದೆ. 2018ರಲ್ಲಿ ಅಸ್ಸಾಂನಲ್ಲಿ 88 ಕೇಸ್ ದಾಖಲಾದರೆ, ಕರ್ನಾಟಕದಲ್ಲಿ 73 ಎಫ್​ಐಆರ್ ದಾಖಲಾಗಿದೆ. 2019ರಲ್ಲೂ ಅಸ್ಸಾಂನಲ್ಲಿ 115 ಕೇಸ್ ದಾಖಲಾಗಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 111 ಕೇಸ್ ದಾಖಲಾಗಿ 2ನೇ ಸ್ಥಾನದಲ್ಲಿತ್ತು.

    ಏನು ಶಿಕ್ಷೆ?: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ತಡೆ ಕಾಯ್ದೆ 2006ರ ಪ್ರಕಾರ ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶಗಳಿವೆ. ಬಾಲ್ಯ ವಿವಾಹ ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ಎಫ್​ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ಅವಕಾಶಗಳಿವೆ. ಆದರೆ ಈ ಕಾಯ್ದೆ ಬಲವಾಗಿಲ್ಲ ಎಂಬ ಅಭಿಪ್ರಾಯವಿದೆ.

    ಜಾಗೃತಿಗೆ ಸಮಿತಿ ರಚನೆ: ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ಮಟ್ಟದ ಸಮಿತಿ 6 ತಿಂಗಳಿಗೊಮ್ಮೆ ಸಭೆ ನಡೆಸಿ ಬಾಲ್ಯ ವಿವಾಹ ತಡೆಗೆ ಜಾರಿಗೊಳಿಸಿರುವ ನಿರ್ದಿಷ್ಟ ಕ್ರಮಗಳನ್ನು ಅನುಷ್ಠಾನಕ್ಕೆ ತರಲಿದೆ. ಕೆಲ ಎನ್​ಜಿಒ ಸಹಕಾರದೊಂದಿಗೆ ಇಲಾಖೆಯು ಬಾಲ್ಯ ವಿವಾಹ ತಡೆಗಟ್ಟಲು ಇನ್ನೂ ಕೆಲ ನೂತನ ಕ್ರಮ ಜಾರಿಗೆ ತರಲು ಚಿಂತಿಸಿದೆ.

    ಸಮಸ್ಯೆ ವಿಶ್ವವ್ಯಾಪಿ: ಭಾರತದಲ್ಲಿ ಕೂಲಿ ಕಾರ್ವಿುಕರು, ಉತ್ತರದ ಗ್ರಾಮೀಣ ಭಾಗದ ಕೃಷಿಕರು, ಅನಕ್ಷರಸ್ಥರೇ ಹೆಚ್ಚಾಗಿ ಈ ಪಿಡುಗಿಗೆ ಬಲಿಯಾಗುತ್ತಾರೆ. ಒಂದು ಸಮೀಕ್ಷೆ ಪ್ರಕಾರ ವಿಶ್ವಾದ್ಯಂತ ಅಂದಾಜು 600 ಮಿಲಿಯನ್​ಗೂ ಅಧಿಕ ಮಹಿಳೆಯರು ಬಾಲ್ಯದಲ್ಲೇ ವಿವಾಹವಾಗಿದ್ದಾರೆ. ಈ ಪೈಕಿ ಅರ್ಧದಷ್ಟು ಪ್ರಕರಣ ಭಾರತ, ಬಾಂಗ್ಲಾದೇಶ, ಬ್ರೆಜಿಲ್ ಮತ್ತು ನೈಜೀರಿಯದ್ದಾಗಿವೆ.

    ತಡೆಯುವುದು ಹೇಗೆ?

    • ಬಾಲ್ಯ ವಿವಾಹದಿಂದಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು
    • ಬಾಲ್ಯ ವಿವಾಹದ ಮಾಹಿತಿ ಸಿಕ್ಕರೆ ಅಧಿಕಾರಿಗಳಿಗೆ ತಿಳಿಸುವುದು
    • ಅಂತಹ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರೇ ಸ್ವಯಂದೂರು ದಾಖಲಿಸಿಕೊಳ್ಳುವುದು

    ಶಾಲೆ ಮುಚ್ಚಿದ್ದರಿಂದಲೂ ಪ್ರಕರಣ ಹೆಚ್ಚಳ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಹಳೇ ಮೈಸೂರು, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕಲಬುರಗಿ, ಕೊಪ್ಪಳ, ರಾಯಚೂರು, ಹಾವೇರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಗದಗ, ತುಮಕೂರು ಸೇರಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್​ನಿಂದ ಶಾಲೆ ಮುಚ್ಚಿದ ಬಳಿಕ ಬಾಲ್ಯ ವಿವಾಹದ ಪ್ರಮಾಣ ವರ್ಷಕ್ಕೆ ಶೇ.25 ರಷ್ಟು ಹೆಚ್ಚಾಗಿರುವ ಮಾಹಿತಿ ಇದೆ.

    ಬಾಲ್ಯ ವಿವಾಹಕ್ಕೆ ಕಾರಣ?

    • ವರದಕ್ಷಿಣೆ, ಅನಕ್ಷರತೆ, ಬಡತನ
    • ಕೌಟುಂಬಿಕ ಒತ್ತಡ, ಹೆಣ್ಣು ಮಕ್ಕಳ ಸಾಕುವುದು ಕಷ್ಟ ಎಂಬ ಕಾರಣ
    • ಆರ್ಥಿಕ ಸಮಸ್ಯೆ, ಹೆಚ್ಚು ಓದಿಸಿದರೆ ಅಷ್ಟೇ ಓದಿರುವ ಗಂಡು ಸಿಗುವುದು ಕಷ್ಟವೆಂಬ ಮನಃಸ್ಥಿತಿ

    ಗಡಿ ಭಾಗದಲ್ಲಿ ಬಡತನ, ಭದ್ರತೆ ದೃಷ್ಟಿಯಿಂದ ಕೂಲಿ ಕಾರ್ವಿುಕರು ಪಿಡುಗಿಗೆ ಒಳಗಾಗುತ್ತಾರೆ. ಹೆಣ್ಣು ಮಕ್ಕಳಿಗೂ ಸೂಕ್ತ ಶಿಕ್ಷಣ ಸಿಕ್ಕರೆ ಬಾಲ್ಯ ವಿವಾಹ ತಡೆಗಟ್ಟಬಹುದು.

    | ಪ್ರಮೀಳಾ ನಾಯ್ಡು ಅಧ್ಯಕ್ಷೆ , ಮಹಿಳಾ ಆಯೋಗ

    ಜಿಲ್ಲಾವಾರು ಮಾಹಿತಿ

    • ಧಾರವಾಡ: ಪ್ರಸಕ್ತ ವರ್ಷ 24 ಬಾಲ್ಯ ವಿವಾಹ/ಯತ್ನ ಪ್ರಕರಣ ವರದಿಯಾಗಿವೆ. ಇದರಲ್ಲಿ 19 ತಡೆಯಲಾಗಿದ್ದು, 5 ಬಾಲ್ಯ ವಿವಾಹ ನಡೆದಿವೆ. 2020ರಲ್ಲಿ 27 ಪ್ರಕರಣ ವರದಿಯಾಗಿದೆ. ಇದರಲ್ಲಿ 26 ತಡೆಯ ಲಾಗಿದ್ದು, 1 ಬಾಲ್ಯ ವಿವಾಹ ನಡೆದಿತ್ತು.
    • ಹಾವೇರಿ: 2020-21ನೇ ಸಾಲಿನಲ್ಲಿ 71 ಹಾಗೂ 2021-2022ನೇ ಸಾಲಿನ ಅ. 1ರವರೆಗೆ 36 ಪ್ರಕರಣ ತಡೆಯಲಾಗಿದೆ.
    • ಚಾಮರಾಜನಗರ: ಜಿಲ್ಲೆಯಲ್ಲಿ ಈ ವರ್ಷ 62 ಬಾಲ್ಯ ವಿವಾಹ ತಡೆಯಲಾಗಿದೆ. ಚಾ.ನಗರ ತಾಲೂಕಿನಲ್ಲಿ 28, ಹನೂರಿನಲ್ಲಿ 17, ಕೊಳ್ಳೇಗಾಲದಲ್ಲಿ 11, ಗುಂಡ್ಲುಪೇಟೆಯಲ್ಲಿ 7, ಯಳಂದೂರಿನಲ್ಲಿ 6 ಬಾಲ್ಯವಿವಾಹ ನಿಲ್ಲಿಸಲಾಗಿದೆ.
    • ಬಳ್ಳಾರಿ: ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಲಾಕ್​ಡೌನ್ ಅವಧಿಯಲ್ಲಿ ಅತಿ ಹೆಚ್ಚು 250 ಬಾಲ್ಯ ವಿವಾಹ ಪ್ರಕರಣ ವರದಿಯಾಗಿವೆ. ಈ ಪೈಕಿ 178 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.
    • ರಾಯಚೂರು: ಜಿಲ್ಲೆಯಲ್ಲಿ 2020 ರಿಂದ ಈವರೆಗೆ ಒಟ್ಟು 22 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಕರೊನಾ ಸಂದರ್ಭದಲ್ಲಿ ನಡೆದಿವೆ.
    • ಕೊಪ್ಪಳ: ಈ ವರ್ಷ 41 ಬಾಲ್ಯವಿವಾಹ ತಡೆಗಟ್ಟಲಾಗಿದೆ. ಲಾಕ್​ಡೌನ್ ನಲ್ಲಿ ಮದುವೆಗೆ ಅವಕಾಶ ನೀಡದ ಕಾರಣ, ಸೂರ್ಯ ಹುಟ್ಟುವ ಮೊದಲೇ ಅನೇಕ ಮದುವೆಗಳು ನಡೆದಿವೆ.
    • ಮೈಸೂರು: 2020-21ನೇ ಸಾಲಿನಲ್ಲಿ 31 ಬಾಲ್ಯವಿವಾಹ ಪ್ರಕರಣ ಠಾಣೆಯ ಮೆಟ್ಟಿಲೇರಿವೆ. ಈ ವರ್ಷ 11 ಪ್ರಕರಣ ಠಾಣೆಯ ಮೆಟ್ಟಿಲೇರಿವೆ.
    • ಹಾಸನ: ಈ ವರ್ಷ ಏಪ್ರಿಲ್​ವರೆಗೆ 145 ಬಾಲ್ಯ ವಿವಾಹದ ಪ್ರಕರಣಗಳಲ್ಲಿ 95 ಮದುವೆ ತಡೆದಿದ್ದು, ಉಳಿದ 50 ವಿವಾಹ ನಡೆದ ನಂತರ ಮಾಹಿತಿ ದೊರೆತಿದೆ. ಈ ಸಂಬಂಧ 34 ಎಫ್​ಐಆರ್ ದಾಖಲಾಗಿವೆ.
    • ಚಿತ್ರದುರ್ಗ: 2021 ಮಾರ್ಚ್​ವರೆಗೆ 105 ಬಾಲ್ಯ ವಿವಾಹ ತಪ್ಪಿಸಲಾಗಿದೆ ಹಾಗೂ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್​ಐಆರ್ ಮಾಡಲಾಗಿದೆ. 2021 ಏಪ್ರಿಲ್​ನಿಂದ ಆಗಸ್ಟ್ ಅಂತ್ಯದವರೆಗೆ 78 ಬಾಲ್ಯವಿವಾಹಗಳನ್ನು ತಡೆದು 3 ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಾಗಿದೆ.
    • ಉಡುಪಿ: ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಂದ ಬಾಲ್ಯ ವಿವಾಹ ಬೆಳಕಿಗೆ ಬಂದಿಲ್ಲ.
    • ತುಮಕೂರು: ತುಮಕೂರಿನಲ್ಲಿ 8 ಬಾಲ್ಯ ವಿವಾಹ ಪ್ರಕರಣ ವರದಿಯಾಗಿವೆ.
    • ರಾಮನಗರ: ಕರೊನಾ ಸಮಯದಲ್ಲಿ 6 ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿವೆ.
    • ಚಿಕ್ಕಬಳ್ಳಾಪುರ/ಕೋಲಾರ: ಚಿಕ್ಕಬಳ್ಳಾಪುರದಲ್ಲಿ 2 ಹಾಗೂ ಕೋಲಾರದಲ್ಲಿ 2 ಬಾಲ್ಯ ವಿವಾಹ ಪ್ರಕರಣ ದಾಖಲಾಗಿವೆ.
    • ದಾವಣಗೆರೆ: ಲಾಕ್​ಡೌನ್ ವೇಳೆ 73 ಬಾಲ್ಯ ವಿವಾಹ ತಡೆಗಟ್ಟಿ ಬಾಲಕಿಯರನ್ನು ರಕ್ಷಿಸಲಾಗಿದೆ. 7 ಬಾಲ್ಯವಿವಾಹ ನೆರವೇರಿದ್ದರ ಸಂಬಂಧ ಎಫ್​ಐಆರ್ ದಾಖಲಾಗಿದೆ. ಈ ವರ್ಷ ಏಪ್ರಿಲ್​ನಿಂದ ಜುಲೈವರೆಗೆ 41 ಬಾಲ್ಯ ವಿವಾಹ ಪ್ರಕರಣಗಳಾಗಿದ್ದು 38 ತಡೆಯಲಾಗಿತ್ತು. 3 ಮದುವೆಗಳು ನಡೆದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts