ಬೆಂಗಳೂರು: ಕರೊನಾ ಸೋಂಕು ತೀವ್ರವಾಗಿ ಹರಡಲು ಆರಂಭಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮಾ.25ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದರು. ಇದರಿಂದಾಗಿ ಮದ್ಯ ಮಾರಾಟ ಸೇರಿ ಎಲ್ಲ ವ್ಯಾಪಾರ-ವಹಿವಾಟು ಸ್ಥಗಿತಗೊಂಡು ಸರ್ಕಾರಗಳಿಗೆ ತೆರಿಗೆ ಆದಾಯದ ಮೂಲಗಳೇ ಬತ್ತಿ ಹೋಗಿದ್ದವು.
ಇತರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೊಂದೆಡೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ತೆರಿಗೆ ಆದಾಯದ ಹಂಚಿಕೆಯ ಬಾಬ್ತು ಕೂಡ ಬಂದಿರಲಿಲ್ಲ. ಅಲ್ಲದೆ ರಾಜ್ಯದೆಲ್ಲಡೆ ಆರ್ಥಿಕ ಅನಿಶ್ಚಿತತೆ ಮೂಡಿದ್ದರಿಂದ ರಾಜ್ಯದ ಖಜಾನೆ ಮೇಲೆ ಭಾರಿ ಒತ್ತಡ ಬಿದ್ದಿತ್ತು.
ಆದರೆ, ಮೇ 4ರಿಂದ ಆರಂಭಗೊಳ್ಳುವಂತೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತಲೇ, ಪರಿಸ್ಥಿತಿ ಬದಲಾಗಲಾರಂಭಿಸಿತು. ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಶೇ.17ರಿಂದ 25 ಹೆಚ್ಚಳ ಮಾಡಿದ ನಂತರದಲ್ಲಂತೂ ಕಾಂಚಾಣದ ಮಹಾಪೂರವೇ ಆರಂಭವಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು ರೈಲ್ವೆ ನಿಲ್ದಾಣದಲ್ಲೇ ಗಂಟಲುದ್ರವ ಪರೀಕ್ಷೆ ಕೇಂದ್ರ ಆರಂಭ
ಮೇ 5ರಿಂದ ಇದುವರೆಗೆ ರಾಜ್ಯದಲ್ಲಿ 2,146.48 ಕೋಟಿ ರೂ. ಮದ್ಯ ಮಾರಾಟವಾಗಿದ್ದು, ಸರ್ಕಾರಕ್ಕೆ 1,387.20 ಕೋಟಿ ರೂ. ತೆರಿಗೆ ಆದಾಯ ಬಂದಿದೆ ಎಂದು ಹೇಳಲಾಗಿದೆ.
ಹೊಸ ವಿತ್ತೀಯ ವರ್ಷದಲ್ಲಿ ಮದ್ಯ ಮಾರಾಟದ ಮೂಲಕ 22,700 ಕೋಟಿ ರೂ. ತೆರಿಗೆ ಆದಾಯ ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿತ್ತು. ಆದರೆ, ಏಪ್ರಿಲ್ ಸಂಪೂರ್ಣ ಲಾಕ್ಡೌನ್ ಆಗಿದ್ದರಿಂದ, ಮದ್ಯ ಮಾರಾಟವಾಗದಿದ್ದರಿಂದ ಅದರ ಆದಾಯ ಖೋತಾ ಆಗಿತ್ತು.
ಆದರೆ, ಇದೀಗ ಹೆಚ್ಚುವರಿ ಆದಾಯ ಸಂಗ್ರಹಿಸಲು ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಶೇ.17ರಿಂದ ಶೇ.25 ಹೆಚ್ಚಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಹೆಚ್ಚುವರಿಯಾಗಿ 2 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ.
‘ಇಂಡಿಯಾ’ನೋ, ‘ಭಾರತ’ನೋ? ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್