ದೇವದುರ್ಗ: ತಾಲೂಕಿನ ಕರಿಗುಡ್ಡ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಕಟ್ಟಿಹಾಕಿದ್ದ ಜೋಡೆತ್ತು ಹಾಗೂ ಎತ್ತಿನ ಬಂಡಿಯನ್ನು ಸೋಮವಾರ ಕಳ್ಳತನ ಮಾಡಲಾಗಿದೆ. ಗಾಜಲದಿನ್ನಿ ಗ್ರಾಮದ ರೈತ ಕರಿಯಪ್ಪ ಸಣ್ಣಮಲ್ಲಯ್ಯ ಅವರ ಎತ್ತುಗಳಾಗಿವೆ. ಸುಮಾರು 70 ಸಾವಿರ ರೂ. ಮೌಲ್ಯದ ಎರಡು ಎತ್ತು ಹಾಗೂ 25ಸಾವಿರ ರೂ. ಮೌಲ್ಯದ ಬಂಡಿ ಕಳ್ಳತನ ಮಾಡಲಾಗಿದೆ. ರೈತ ಕರಿಯಪ್ಪ ಕೆಲಸ ನಿಮಿತ್ತ ದೇವದುರ್ಗ ಪಟ್ಟಣಕ್ಕೆ ಬಂದಿದ್ದಾರೆ. ಸಂಜೆ ಊರಿಗೆ ಮರಳಿ ಹೋಗುವಾಗ ಕತ್ತಲಾಗಿದ್ದರಿಂದ ಮಗಳ ಊರು ಕರಿಗುಡ್ಡದಲ್ಲಿ ರಾತ್ರಿ ತಂಗಿದ್ದಾರೆ. ಗ್ರಾಮದ ಸರ್ಕಾರಿ ಶಾಲೆ ಹತ್ತಿರದ ಮರದ ಕೆಳಗೆ ಬಂಡಿ ಬಿಟ್ಟು ಜೋಡೆತ್ತು ಕಟ್ಟಿ ಹಾಕಿದ್ದಾರೆ. ಬೆಳಗ್ಗೆ ನೋಡಿದಾಗ ಕಳ್ಳತನವಾಗಿರುವ ವಿಷಯ ತಿಳಿದು ರೈತ ಕಂಗಾಲಾಗಿದ್ದಾನೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪಿಐ ಕೆ.ಹೊಸಕೇರಪ್ಪ ತಿಳಿಸಿದ್ದಾರೆ.