ಕಾರಟಗಿ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಸರ್ಕಾರ ವಿವಿಧ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಸಿ.ಎಚ್.ರವಿನಂದ ಹೇಳಿದರು.
ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ತುಂಗಭದ್ರಾ ಸಂಜೀವಿನಿ ಮಹಿಳಾ ಒಕ್ಕೂಟ ಆಯೋಜಿಸಿದ್ದ ಗ್ರಾಪಂ ಮಟ್ಟದ ಪೇಪರ್ ಪ್ಲೇಟ್, ಗ್ಲಾಸ್ ತಯಾರಿಕೆ ಘಟಕ ಹಾಗೂ ಮಾರಾಟದ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿ ಬದುಕಿಗೆ ಸ್ವಸಹಾಯ ಗುಂಪುಗಳನ್ನು ರಚಿಸಿಕೊಳ್ಳಬೇಕು. ಗುಂಪಿನ ಬಲಿಷ್ಠತೆಗೆ ಸರ್ಕಾರ ಆರ್ಥಿಕ ಸಹಾಯ ಒದಗಿಸುವ ಜತೆಗೆ ವಿವಿಧ ಉದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದರು.
ಸಂಜೀವಿನಿ ಯೋಜನೆಯಡಿ ಕೈಗಾರಿಕೆ ವಸ್ತುಗಳ ತಯಾರಿಕೆ ತರಬೇತಿ ನೀಡಲಾಗುತ್ತಿದ್ದು ಮಹಿಳೆಯರು ಅದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ದಿನಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಸಿದ್ಧಪಡಿಸಿ ಇಲ್ಲಿಯೇ ಮಾರಾಟ ಮಾಡುವ ಮೂಲಕ ಆರ್ಥಿಕ ಸಬಲತೆಗೆ ಮುಂದಾಗಬೇಕು ಎಂದು ರವಿನಂದ ತಿಳಿಸಿದರು. ತಾಪಂ ಸಹಾಯಕ ನಿರ್ದೇಶಕ ಎನ್.ನರಸಪ್ಪ ಮಾತನಾಡಿ, ಸರ್ಕಾರ ಸಂಜೀವಿನಿ ಯೋಜನೆಯಡಿ ಸ್ವಸಹಾಯ ಸಂಘದ ಸದಸ್ಯರಿಗೆ ವೈಯಕ್ತಿಕವಾಗಿ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಿದೆ. ಮಹಿಳೆಯರು ಹೊಸ ಉದ್ಯಮಗಳನ್ನು ಕಂಡುಕೊಂಡು ಆರ್ಥಿಕ ನೆರವು ಪಡೆದುಕೊಳ್ಳಬೇಕು. ಗುಳೆ ಹೋಗುವ ಬದಲು ಸ್ವಗ್ರಾಮದಲ್ಲೇ ನಿರಂತರ ಉದ್ಯೋಗಿಗಳಾಗಬೇಕು ಎಂದರು.