ಕಾರಟಗಿ: ಸೇವೆ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಗತಿಪರ ಪೌರಕಾರ್ಮಿಕ ಸಂಘ ತಾಲೂಕು ಘಟಕ ಪಟ್ಟಣದ ಪುರಸಭೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.
ಶನಿವಾರ ಭೇಟಿ ನೀಡಿದ ಸಂಘದ ರಾಜ್ಯಾಧ್ಯಕ್ಷ ಜೆ.ಭಾರದ್ವಾಜ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ 2016-17ನೇ ಸಾಲಿನಲ್ಲಿ ಸಚಿವ ಸಂಪುಟದಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಕಾಯಂಗೊಳಿಸುವ ನಿರ್ಣಯ ಕೈಗೊಂಡಿತ್ತು. ಆದರೆ, ಅಧಿಕಾರಿಗಳು ಹಣದಾಸೆ ಮತ್ತು ಸಂಘಟನೆಗಳ ನಡುವೆ ಒಡೆದಾಳುವ ನೀತಿ ರೂಪಿಸಲು ನೇರಪಾವತಿ, ನೇರನೇಮಕಾತಿ, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಟೈಮ್ಸ್ಕೇಲ್ ಎಂಬುವ ಅಸಂಬದ್ಧ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಕಾರ್ಮಿಕರನ್ನು ಅತಿಯಾಗಿ ಶೋಷಿಸುವ ಗುತ್ತಿಗೆ ಪದ್ಧತಿಯು ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿಯಾಗಿದೆ. ಇದರಿಂದ ಕಾರ್ಮಿಕರ ಕುಟುಂಬಗಳು ನಾಶವಾಗುತ್ತಿದೆ. ಸರ್ಕಾರ ಕೂಡಲೇ ಈ ನೀತಿ ಕೈ ಬಿಟ್ಟು ಎಲ್ಲ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಮರಿಯಪ್ಪ ಸಾಲೋಣಿ, ಪುರಸಭೆ ಕಾರ್ಮಿಕರಾದ ದುರುಗಪ್ಪ, ರವಿ, ಹುಲುಗಪ್ಪ, ಇಬ್ರಾಹಿಂ ಇತರರಿದ್ದರು.