ಕಾನ್ಪುರ (ಉತ್ತರ ಪ್ರದೇಶ): ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿರುವ ಕಾರಣ ನೀಡಿ ವೃದ್ಧನೊಬ್ಬನನ್ನು ಪೊಲೀಸರು ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಪಂಕಿ ಎಂಬಲ್ಲಿ ನಡೆದಿದೆ. ಇದರ ವೀಡಿಯೋ ಈಗ ವೈರಲ್ ಆಗಿದ್ದು, ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ವೃದ್ಧ ಹನುಮಂತನ ಭಕ್ತ. ಪ್ರತಿದಿನವೂ ಅಶ್ವತ್ಥ ವೃಕ್ಷಕ್ಕೆ ನೀರೆಯುತ್ತಾರೆ. ಲಾಕ್ಡೌನ್ ಇದ್ದರೂ, ಮರಕ್ಕೆ ನೀರನ್ನು ಹಾಕಲು ಹೋಗುತ್ತಿದ್ದರು. ಈ ವೇಳೆ ಅವರನ್ನು ಹಿಡಿದ ಪೊಲೀಸ್ ಅಧಿಕಾರಿ ಅವರಿಗೆ ಹಿಂಸಿಸಿದ್ದೂ ಅಲ್ಲದೇ ಅವಮಾನಗೊಳಿಸಿದ್ದಾರೆ.
ವೃದ್ಧನನ್ನು ನೆಲದಲ್ಲಿ ಕೂರುವಂತೆ ಒತ್ತಾಯಿಸಿ ತೆವಳಿಕೊಂಡು ದೇಗುಲಕ್ಕೆ ಹೋಗುವಂತೆ ಮಾಡಲಾಗಿದೆ. ‘ದೇವರು ನಿನ್ನನ್ನು ಪರೀಕ್ಷಿಸುತ್ತಿದ್ದಾನೆ’ ಎಂದು ಲೇವಡಿ ಮಾಡಿರುವ ಪೊಲೀಸರು, ಮರಕ್ಕೆ ಅಭಿಷೇಕ ಮಾಡಲು ಇಟ್ಟುಕೊಂಡಿರುವ ನೀರನ್ನು ತಟ್ಟೆಗೆ ಸುರಿದು ಅವಮಾನ ಮಾಡಿದ್ದಾರೆ. ವೃದ್ಧ ಮನವಿ ಮಾಡಿಕೊಂಡರೂ ಕೇಳಲಿಲ್ಲ.
ಇದನ್ನು ಸ್ಥಳೀಯರೊಬ್ಬರು ವೀಡಿಯೋ ಮಾಡಿದ್ದು ಅದು ವೈರಲ್ ಆಗಿದೆ. ವೀಡಿಯೋ ನೋಡಿದ ಕಾನ್ಪುರ ನಗರ ಪೊಲೀಸರು, ದೃಶ್ಯದಲ್ಲಿ ಕಾಣುವ ಪೊಲೀಸ್ ಅಧಿಕಾರಿ ಪಂಕಿ ಪೊಲೀಸ್ ಠಾಣೆಯ ಮುಖ್ಯಸ್ಥರು. ವೃದ್ಧ ವ್ಯಕ್ತಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ಈ ರೀತಿ ಮಾಡಲಾಗಿದೆ. ವೃದ್ಧ ಕ್ಷಮೆಯಾಚಿಸಿದ್ದಾರೆ. ವೃದ್ಧರನ್ನು ಅವರ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ ಇಲ್ಲಿಗೆ ಸುಮ್ಮನಾದ ಜನರು ಪೊಲೀಸರ ದೌರ್ಜನ್ಯದ ವಿರುದ್ಧ ಕಿಡಿಕಾರಿ ತನಿಖೆಗೆ ಆಗ್ರಹಿಸಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)