ಕನಕಗಿರಿ: ತಾಲೂಕಿನ ಗಡಿ ಗ್ರಾಮ ನವಲಿ-ಕಲ್ಮಂಗಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಿಂಧನೂರು, ಕುಷ್ಟಗಿ, ಲಿಂಗಸುಗೂರಿಗೆ ತೆರಳುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಲೋಕೋಪಯೋಗಿ ಇಲಾಖೆಗೆ ಒಳಡುವ ಈ ಮಾರ್ಗದಲ್ಲಿ ಕುಷ್ಟಗಿ, ಸಿಂಧನೂರು, ಲಿಂಗಸುಗೂರು ಹಾಗೂ ಮಸ್ಕಿ ಭಾಗಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಂಕನಾಳ ದಾಟಿದ ಮೇಲೆ ರಸ್ತೆಯಲ್ಲಿ ಗುಂಡಿಗಳೇ ಕಾಣಸಿಗುತ್ತವೆ. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಪರಿತಪಿಸುವಂತಾಗಿದೆ. ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಹಲವು ಬೈಕ್ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಹಗಲು ರಾತ್ರಿಯನ್ನದೆ ಅಕ್ರಮ ಮರಳು ಸಾಗಣೆ ಟಿಪ್ಪರ್ಗಳು ಸಂಚರಿಸುತ್ತಿರುವುದು ರಸ್ತೆ ಹಾಳಾಗಲು ಕಾರಣ ಎನ್ನಲಾಗಿದೆ. ಇನ್ನು ಮುಂದಾದರೂ ಕ್ಷೇತ್ರದ ಶಾಸಕರು ಹಾಗೂ ಸಂಸದರು ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ನವಲಿಯಿಂದ ಕಲ್ಮಂಗಿ ವರೆಗಿನ ರಸ್ತೆಯು ನಮ್ಮ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದ್ದು, ರಾಜ್ಯ ಸರ್ಕಾರದ ಅನುದಾನಲ್ಲಿ ಶೀಘ್ರವೇ ದುರಸ್ತಿಪಡಿಸಲಾಗುವುದು.
| ಸುದೀಶ್, ಎಇಇ, ಪಿಡಬ್ಲುೃಡಿ ಇಲಾಖೆ ಗಂಗಾವತಿ.ಸಂಕನಾಳ ನಂತರದ ಕಲ್ಲು ಮಣ್ಣಿನ ದಾರಿಯಲ್ಲಿ ಸಾಗುವುದು ಸಾಹಸದ ಕೆಲಸವಾಗಿದೆ. ಯಾವುದಾದರು ವಾಹನದ ಹಿಂದೆ ಸಾಗುವ ಬೈಕ್ ಸವಾರರಿಗೆ ಧೂಳಿನ ಅಭಿಷೇಕವಾಗುತ್ತದೆ. ಲಘು ವಾಹನಗಳ ಸಂಚಾರ ಬಹುಕಷ್ಟವಾಗಿದೆ. ಶೀಘ್ರವೇ ರಸ್ತೆ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು.
| ವಿರುಪಣ್ಣ, ವಾಹನ ಸವಾರ, ಕಲ್ಲೂರು