ಕನಕಗಿರಿ: ತಾಲೂಕಿನ ಕರಡಿಗುಡ್ಡದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಶುಕ್ರವಾರ ಚಿರತೆ ಸೆರೆಯಾಗಿದೆ. ಕಳೆದ ಐದಾರು ತಿಂಗಳಿಂದ ಜನ, ಜಾನುವಾರುಗೆ ಚಿರತೆ ತೊಂದರೆ ನೀಡಿತ್ತು.
ಗುರುವಾರ ಮಾವಿನ ತೋಟದಲ್ಲಿ ನಾಯಿ ಮರಿಯನ್ನು ಹೊತ್ತೊಯ್ದಿತ್ತು. ಈ ಕುರಿತು ಮಾಹಿತಿ ತಿಳಿದ ರೈತರು ಗುರುವಾರ ರಾತ್ರಿ ಬೋನಿನಲ್ಲಿ ಮಾಂಸ ಇಟ್ಟಿದ್ದರು. ಮಾಂಸ ತಿನ್ನ ತಿನ್ನಲು ಬಂದು ಬೋನಿನೊಳಗೆ ಸೆರೆಯಾಗಿದೆ. ಸ್ಥಳೀಯರು ಚಿರತೆ ಸೆರೆಯಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿ ಜಂಬಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು. ಇದು ಮೂರೂವರೆ ವರ್ಷದ ಗಂಡು ಚಿರತೆಯಾಗಿದ್ದು, ವಡ್ಡರಹಟ್ಟಿಗೆ ರವಾನೆ ಮಾಡಲಾಗುವುದು. ವೈದ್ಯಕೀಯ ಪರೀಕ್ಷೆ ನಂತರ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದರು.
ಇನ್ನೂ ಎರಡು ಚಿರತೆಗಳಿದ್ದು, ಅವುಗಳನ್ನು ಕೂಡ ಸೆರೆ ಹಿಡಿಯಬೇಕೆಂದು ರೈತರು ಆಗ್ರಹಿಸಿದರು. ರೈತರಾದ ವೆಂಕಟೇಶ, ದುರ್ಗಪ್ಪ, ಆಂಜನೇಯ, ಅರಣ್ಯ ಇಲಾಖೆ ಸಿಬ್ಬಂದಿ ಈರಪ್ಪ ಹಾದಿಮನಿ, ಲಕ್ಷ್ಮಣ, ಗುಂಡಪ್ಪ ಮತ್ತು ಇತರರಿದ್ದರು.