ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾಪಂ ವ್ಯಾಪ್ತಿಯ ಕನಕಾಪುರ ಗ್ರಾಮಕ್ಕೆ ತಾಪಂ ಇಒ ಚಂದ್ರಶೇಖರ ಕಂದಕೂರು ಸೋಮವಾರ ಭೇಟಿ ನೀಡಿ, ಜೆಜೆಎಂ ಕಾಮಗಾರಿ ಹಾಗೂ ಒಡೆದ ಪೈಪ್ಲೈನ್ ಪರಿಶೀಲನೆ ನಡೆಸಿದರು.
ಬಸರಿಹಾಳ ಗ್ರಾಮ ಹಾಗೂ ಕೆಲ ಸಂದರ್ಭಗಳಲ್ಲಿ ಕನಕಾಪುರ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ ಪಕ್ಕದ ಬೋರ್ವೆಲ್ ನಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಪೈಪ್ಲೈನ್ ಒಡೆದು ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಈ ಕುರಿತು ಆ.26ರಂದು ವಿಜಯವಾಣಿ ‘ ಕನಕಾಪುರದಲ್ಲಿ ಒಡೆದ ಜೆಜೆಎಂ ಪೈಪ್ಲೈನ್’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿದ ಇಒ ಚಂದ್ರಶೇಖರ, ಜೆಜೆಎಂ ಕಾಮಗಾರಿಗೆ ವಾಲ್ವ್ಗಳನ್ನು ಅಳವಡಿಸಿಲ್ಲ. ಅಲ್ಲದೇ ಪಂಚಾಯಿತಿಯಿಂದ ಸರಬರಾಜಾಗುವ ಪೈಪ್ ಒಡೆದಿದೆ. ಇದರಿಂದ ಗ್ರಾಮದಲ್ಲಿ ನೀರು ಹರಿಯುತ್ತಿದೆ. ದುರಸ್ತಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಮಧ್ಯಾಹ್ನ ದುರಸ್ತಿ: ಗ್ರಾಪಂನಿಂದ ಸರಬರಾಜಾಗುವ ಪೈಪ್ಲೈನ್ ಒಡೆದ ಸ್ಥಳಗಳಲ್ಲಿ ಮಧ್ಯಾಹ್ನ ಸಿಬ್ಬಂದಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಜೆಜೆಎಂನಡಿ ನೀರು ಸರಬರಾಜಾಗುತ್ತಿರುವ ಪೈಪ್ಲೈನ್ ಕಾಮಗಾರಿ ರಿಪೇರಿ ಬಾಕಿ ಉಳಿದಿದೆ.