ಕನಕಗಿರಿ: ತಾಲೂಕಿನಾಂದ್ಯಂತ ಕೆಲ ದಿನಗಳಿಂದ ಪುಷ್ಯ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಬೆಳೆಗಳು ಕಂಗೊಳಿಸುತ್ತಿವೆ.
ಪ್ರತಿ ವರ್ಷ ಆಷಾಢ ಮತ್ತು ಶ್ರಾವಣ ಮಾಸದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿತ್ತು. ಬಿತ್ತಿದ ಬೆಳೆಯು ತೇವಾಂಶದ ಕೊರತೆಯಿಂದ ಬಾಡುತ್ತಿದ್ದವು. ಇದರಿಂದ ರೈತರು ಕಂಗಾಲಾಗುತ್ತಿದ್ದರು. ಕರೊನಾ ವೈರಸ್ ಭೀತಿಯ ನಡುವೆಯು ರೈತರು ಬಿತ್ತನೆ ಕಾರ್ಯವನ್ನು ಮುಂದುವರಿಸಿದ್ದರು. ತಾಲೂಕಿನಲ್ಲಿ ಸಜ್ಜೆ, ನವಣೆ, ಹತ್ತಿ, ಮೆಕ್ಕೆಜೋಳ, ತೊಗರಿ, ಔಡಲ್ಲ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಮುಂಗಾರು ಬಿತ್ತನೆಯು ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ತೊಡಗಿಕೊಂಡಿದ್ದಾರೆ.
ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ: ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಮಳೆಯಿಂದ, ಮುಂಗಾರು ಬೆಳೆಗಳಾದ ಹೆಸರು ,ಉದ್ದು ಸೂರ್ಯಕಾಂತಿ ಬೆಳೆಗೆ ಕಳೆ ಬಂದಿದೆ. ಕೆಲ ದಿನಗಳ ಹಿಂದೆ ಆರಿದ್ರಾ ಮಳೆಯಾಗದೆ, ರೈತರು ಆತಂಕ ಗೊಂಡಿದ್ದರು. ಈ ಮಳೆಯಿಂದಾಗಿ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಹೆಸರು, ಸೂರ್ಯಕಾಂತಿ ಬೆಳೆ ಗಳು ಬಂದಿದ್ದು, ಹೆಸರಿನ ಬುಡ್ಡಿ ಬಿಡಿಸುತ್ತಿದ್ದಾರೆ. ಮೋಡ ಕವಿದ ವಾತಾವರಣ ದಿಂದ ಹೆಸರು ಬುಡ್ಡಿ ಒಣಗದಂತಾಗಿವೆ. ಇದರಿಂದ ರೈತರು ಇಕ್ಕಟ್ಟಿಗೆ ಸಿಲುಕಿದಂತಾಗಿದ್ದಾರೆ.
ಕನಕಗಿರಿ ತಾಲೂಕಿನಲ್ಲಿ ಈಗಾಗಲೇ 20 ಸಾವಿರ ಹೇಕ್ಟರ್ ಬಿತ್ತನೆ ಕಾರ್ಯ ಮುಗಿದಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಉತ್ತಮ ಇಳುವರಿಯ ನಿರೀಕ್ಷೆ ಇದೆ.
| ತಿಪ್ಪೇಸಾಮಿ.ವಿ., ಸಹಾಯಕ ಕೃಷಿ ನಿರ್ದೇಶಕ, ಗಂಗಾವತಿ