ಹಾವೇರಿ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ 536ನೇ ಶ್ರೀ ಕನಕ ಜಯಂತ್ಯುತ್ಸವದ ನಿಮಿತ್ತ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನ. 28ರಿಂದ 30ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನಕಗುರುಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜೀಗೌಡ್ರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 28ರಂದು ಬೆಳಗ್ಗೆ 10ಗಂಟೆಗೆ ಸಿದ್ದರಾಮನಂದಪುರಿ ಸ್ವಾಮೀಜಿ ಹಾಗೂ ಸ್ವಾಮಿ ಅಮೋಘಸಿದ್ದೇಶ್ವರಾನಂದರ ಸಾನ್ನಿಧ್ಯದಲ್ಲಿ ಧ್ವಜಾರೋಹಣ ಮತ್ತು ಹೊಳೆಪೂಜೆ ನಡೆಯಲಿದೆ.
11 ಗಂಟೆಗೆ ಜಿಲ್ಲೆಯ ವಿವಿಧಡೆಯಿಂದ ಆಗಮಿಸುವ 108 ಬೀರದೇವರುಗಳ ಪಲ್ಲಕ್ಕಿ ಸ್ವಾಗತ ಕಾರ್ಯಕ್ರಮ, ನಂತರ ಮಧ್ಯಾಹ್ನ 3.30ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಕನಕ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ರಾತ್ರಿ 10ಗಂಟೆಗೆ ಹಾಸ್ಯಭರಿತ ಗೌಡ ಮೆಚ್ಚಿದ ಕನ್ಯೆ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ನ. 29ರಂದು ಬೆಳಗ್ಗೆ 11.30ಕ್ಕೆ ನಡೆಯುವ ಭಾವೈಕ್ಯ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ವಿಜಯಪುರ ಹಜರತ್ ಹಾಶಿಮ್ ಪೀರ್ ದರ್ಗಾದ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಹಾಗೂ ಕ್ಯಾಥೋಲಿಕ್ ಧರ್ಮಗುರು ಡಾ. ಫಾ. ಅಲ್ಫೋನ್ಸ್ ಫರ್ನಾಂಡಿಸ್ ಯೇಸ್ ಸಾನ್ನಿಧ್ಯ ವಹಿಸಲಿದ್ದಾರೆ.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ. ಕನಕಗುರುಪೀಠದ ಸಂಸ್ಥಾಪಕ ಅಧ್ಯಕ್ಷ ಎಚ್. ವಿಶ್ವನಾಥ ಭಾವೈಕ್ಯತೆ, ಸಚಿವರಾದ ಭೈರತಿ ಸುರೇಶ, ಶಿವಾನಂದ ಪಾಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 9 ಗಂಟೆಗೆ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ 10 ಗಂಟೆಗೆ ಹಾಸ್ಯಭರಿತ ಸಂದಿ ಮನಿ ಸಂಗವ್ವ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ನ. 30ರಂದು ಬೆಳಗ್ಗೆ 10 ಗಂಟೆಗೆ ಜಯಂತ್ಯುತ್ಸವ, ರಥೋತ್ಸವ ನಡೆಯಲಿದೆ. ಹೊಸದುರ್ಗ ಕನಕಗುರುಪೀಠ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಸೇರಿ ನಾಡಿನ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ರಾತ್ರಿ 10ಗಂಟೆಗೆ ಶ್ರೀ ಕನಕಗುರುಪೀಠದ ಶಾಲಾ, ಕಾಲೇಜುಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಪ್ರಮುಖರಾದ ಶಂಕ್ರಣ್ಣ ಮಾತನವರ, ಮಾರುತಿ ಹರಿಹರ, ಸಿದ್ದಪ್ಪ ಲಿಂಗಮ್ಮನವರ, ರಾಜೇಂದ್ರ ಹಾವೇರಣ್ಣನವರ, ಸಂಜೀವಕುಮಾರ ನೀರಲಗಿ, ಹನುಮಂತಗೌಡ ಗಾಜೀಗೌಡ್ರ, ಯಲ್ಲಪ್ಪ ಮಣ್ಣೂರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.