ಕಲಘಟಗಿ: ಅಯೋಧ್ಯೆಯ ಅಧಿಪತಿ ಪ್ರಭು ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಜ. 22ರಂದು ವಿರಾಜಮಾನವಾಗಲಿರುವ ಬಾಲರಾಮನ ಮೂರ್ತಿ ಕೆತ್ತನೆಯ ಕಲಾ ಕುಸುರಿಯ ತಂಡದಲ್ಲಿ ತಾಲೂಕಿನ ಜುಂಜನಬೈಲ್ ಗ್ರಾಮದ ಯುವ ಶಿಲ್ಪಿ ಪ್ರಕಾಶ ಹರಮಣ್ಣವರ ಸಹ ಪಾಲ್ಗೊಂಡಿದ್ದಾರೆ.
ರಾಮಲಲ್ಲಾ ಮೂರ್ತಿ ಕೆತ್ತನೆ ಕಾರ್ಯವನ್ನು ವಹಿಸಿಕೊಂಡಿರುವ ಮೂರು ತಂಡಗಳಲ್ಲಿ ಬೆಂಗಳೂರಿನ ವಿಪಿನ್ ಬದೋರಿಯಾ ಮತ್ತು ಜಿ.ಎಲ್. ಭಟ್ ನೇತೃತ್ವದ ಗುರುಕುಲದ 5 ವಿದ್ಯಾರ್ಥಿಗಳ ಪೈಕಿ ಕಲಘಟಗಿ ತಾಲೂಕಿನ ಜುಂಜನಬೈಲ್ ಗ್ರಾಮದ ಯುವ ಶಿಲ್ಪಿ ಪ್ರಕಾಶ ಹರಮಣ್ಣವರ ಅವರೂ ಒಬ್ಬರು.
ಅಯೋಧ್ಯೆ ಮಂದಿರದಲ್ಲಿದ್ದ ಬಾಲರಾಮನ ಪ್ರತಿರೂಪವನ್ನು ಕೃಷ್ಣ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಮೂರ್ತಿ 7.5 ಅಡಿ ಎತ್ತರ, 24 ಇಂಚು ದಪ್ಪ ಹಾಗೂ 41 ಇಂಚು ಅಗಲವಿದೆ. ಈಗಾಗಲೇ ಮೂರು ತಂಡಗಳು ಕೆತ್ತನೆ ಮಾಡಿರುವ ಮೂಲ ಮೂರ್ತಿಗಳಲ್ಲಿ ಒಂದನ್ನು ಜ. 17 ರಂದು ಆಯ್ಕೆ ಮಾಡಲಾಗುತ್ತದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದೆ.
ಕಲಘಟಗಿಯ ಗುಡ್ ನ್ಯೂಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಶಿಲ್ಪ ಗುರುಕುಲದಲ್ಲಿ 2 ವರ್ಷ ಅಭ್ಯಾಸ ಮಾಡಿದ್ದೇನೆ. ಮೈಸೂರಿನ ರವಿವರ್ಮ ಕಾಲೇಜಿನಲ್ಲಿ ಬಿವಿಎ ಪದವಿ ಪಡೆದುಕೊಂಡು, ಇದೀಗ ಸಾಗರದಲ್ಲಿ ಕಲಾ ಲೋಕ ಎಂಬ ಸ್ಟುಡಿಯೋ ತೆರೆದು ಶಿಲ್ಪ ಕಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಭು ಶ್ರೀರಾಮಚಂದ್ರನ ಮೂರ್ತಿ ತಯಾರಿಕೆಯಲ್ಲಿ ನನ್ನನ್ನು ಆಯ್ಕೆ ಮಾಡಿದ ನನ್ನ ಗುರುಗಳಾದ ವಿಪಿನ್ ಬದೋರಿಯಾ ಅವರಿಗೆ ಅಭಾರಿಯಾಗಿದ್ದೇನೆ
> ಪ್ರಕಾಶ ಹರಮಣ್ಣವರ, ಶಿಲ್ಪಿ
ಅಯೋಧ್ಯೆಯಲ್ಲಿ ನಮ್ಮ ತಾಲೂಕಿನ ಯುವ ಶಿಲ್ಪಿಯ ಕಲೆ ಸ್ಪರ್ಶ ಆಗುತ್ತಿರುವುದು ತಾಲೂಕಿಗೆ ಹೆಮ್ಮೆಯ ವಿಷಯ.
> ಫಕೀರೇಶ ನೇಸರೇಕರ, ತಾಪಂ ಮಾಜಿ ಅಧ್ಯಕ್ಷಗುರುಕುಲದಲ್ಲಿ ಪ್ರಕಾಶ ತುಂಬ ಅಚ್ಚುಕಟ್ಟಾಗಿ ಶಿಲ್ಪ ಕೆತ್ತನೆ ಮಾಡುವುದನ್ನು ನೋಡಿದ್ದೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮಮೂರ್ತಿ ಕೆತ್ತನೆ ಅತ್ಯಂತ ಜವಾಬ್ದಾರಿಯುತ ಕಾರ್ಯ. ನಮ್ಮ ಶಿಲ್ಪಕಲೆ ಕಾರ್ಯ ಅಚ್ಚುಕಟ್ಟಾಗಿ ಆಗಬೇಕಾಗಿರುವುದರಿಂದ ಇವರನ್ನು ಆಯ್ಕೆ ಮಾಡಿಕೊಂಡಿದ್ದೆ.
>ವಿಪಿನ್ ಬದೋರಿಯಾ, ಶಿಲ್ಪ ಕಲಾವಿದ