ಚಿತ್ರದುರ್ಗ: ಹಿರಿಯ ನಾಗರಿಕರು ಮಕ್ಕಳಿದ್ದಂತೆ,ಅವರ ಪಾಲನೆ-ಪೋಷಣೆ ಕರ್ತವ್ಯದಿಂದ ಯಾರೂ ಹಿಮ್ಮುಖವಾಗಬಾರದೆಂದು ಹಿರಿಯ ಸಿವಿಲ್ ನ್ಯಾಯಾಧೀಶ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಹೇಳಿದರು.
ಜಿಲ್ಲಾಡಳಿತ,ವಕೀಲರ ಸಂಘ,ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ಮತ್ತಿತರ ಸಂಘ-ಸಂಸ್ಥೆಗಳಾಶ್ರಯದಲ್ಲಿ ಗುರುವಾರ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಆಶ್ರಮದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ರಕ್ಷಣೆಗೆ ಕಾನೂನು ಸೇವಾ ಪ್ರಾಧಿಕಾರದ ನೆರವು ಸದಾ ಇರುತ್ತದೆ. ಮಗ,ಸೊಸೆ,ಮೊಮ್ಮಕ್ಕಳು, ವಯಸ್ಸಾದ ಸಂದರ್ಭದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ಉದ್ದೇಶದಿಂದ ಅವರಿಗೆ ಸ್ವಯಾರ್ಜಿತ ಆಸ್ತಿಯನ್ನು ಬರೆದು ಕೊಟ್ಟಿರುತ್ತಾರೆ. ಆ ದರೆ ಆಸ್ತಿ ಕೈ ಸೇರಿದ ಬಳಿಕ ಹಿರಿಯರನ್ನು ಹೊರ ಹಾಕಿರುವ ಅನೇಕ ಉದಾಹರಣೆಗಳಿವೆ. ಪ್ರಾಧಿಕಾರದ ನೆರವಿನಿಂದ ಆಸ್ತಿ ಹಿಂಪಡೆಯು ವ ಅಧಿಕಾರ ಹಿರಿಯ ನಾಗರಿಕರಿಗೆ ಇದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳು ಎಸಿ ಕೋರ್ಟ್ ನಲ್ಲಿ ಮೂರು ತಿಂಗಳ ಒಳಗೆ ಇತ್ಯರ್ಥ ಪಡಿಸಲಾಗುತ್ತದೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ್ ಮಾತನಾಡಿ, ಇಳಿ ವಯಸ್ಸಿನಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡುವುದರ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ಹಿರಿಯ ನಾಗರಿಕರಿಗೆ ಸಲಹೆ ನೀಡಿದರು.
ರಾಜ್ಯಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ,ಹಿರಿಯ ನಾಗರಿಕರ ಜಿಲ್ಲಾ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಜಿಲ್ಲಾ ಯೋಜನಾ ಸಂಯೋಜಕಿ ಪಿ.ಶಾಂತಮ್ಮ ಮತ್ತಿತರರು ಇದ್ದರು.