ಬ್ಯಾಡಗಿ: ಮಕ್ಕಳ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಟಿ. ಸತೀಶ, ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಅವರು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ವಿನಯ ರೂರಲ್ ಡೆವಲಪ್ವೆುಂಟ್ ಸೊಸೈಟಿಯ ಮಕ್ಕಳ ತೆರೆದ ತಂಗುದಾಣದಲ್ಲಿ ಮಕ್ಕಳಿಗೆ ಹಣ್ಣು, ಹಂಪಲ ಹಾಗೂ ನೋಟ್ಬುಕ್ಗಳನ್ನು ಮಂಗಳವಾರ ವಿತರಿಸಿದರು.
ಹಿರಿಯ ನ್ಯಾಯಾಧೀಶ ಎಸ್.ಟಿ. ಸತೀಶ ಮಾತನಾಡಿ, ಇಲ್ಲಿ 7ರಿಂದ 10 ವರ್ಷದೊಳಗಿನ ಚಿಕ್ಕ ಮಕ್ಕಳಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಏನಾದರೂ ಸಮಸ್ಯೆಯಿದ್ದಲ್ಲಿ ಗಮನಕ್ಕೆ ತನ್ನಿ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಸ್ವಚ್ಛತೆಗೆ ಒತ್ತು ನೀಡುವುದು, ಮಕ್ಕಳ ಅಭ್ಯಾಸದ ಕಡೆಗೆ ಗಮನ, ಹೊರಗೆ ಶಾಲೆಗಳಿಗೆ ತೆರಳುವಾಗ ಜಾಗರೂಕತೆ ವಹಿಸಬೇಕು ಎಂದು ಸ್ಥಳೀಯ ವ್ಯವಸ್ಥಾಪಕರಿಗೆ ತಿಳಿಸಿದರು. ಚಿಕ್ಕಮಕ್ಕಳೊಂದಿಗೆ ಕೆಲಕಾಲ ಪ್ರೀತಿಯಿಂದ ಅವರ ಮಾತುಗಳನ್ನು ಆಲಿಸುವ ಮೂಲಕ ಸಂತಸಪಟ್ಟರು.
ಶಿಶು ಯೋಜನಾಧಿಕಾರಿ ವೈ.ಟಿ. ಹೆಬ್ಬಳ್ಳಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ರ್ಬಾ, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ವಕೀಲರಾದ ಎಂ.ಪಿ. ಹಂಜಗಿ, ಎಂ.ಬಿ. ಬಳಿಗಾರ, ಎಚ್.ಎಚ್. ಕಾಟೇನಹಳ್ಳಿ, ಎಸ್.ಎಸ್. ಕೊಣ್ಣೂರು, ಎಂ.ಜೆ. ಪಾಟೀಲ ಹಾಗೂ ಸಂಸ್ಥೆಯ ಅಧ್ಯಕ್ಷ ಎಂ.ಎಚ್. ಪಾಟೀಲ ಹಾಗೂ ಚೈತ್ರಾ ಪಾಟೀಲ ಇದ್ದರು.