ನಿಪ್ಪಾಣಿ: ನಗರ ಸಮೀಪದ ನಾಗನೂರ ಹದ್ದಿನಲ್ಲಿ ಬರುವ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್ನಲ್ಲಿ ಕೋವಿಡ್ ಸೆಂಟರ್ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್ನಲ್ಲಿ ಗುರುವಾರ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಇಲ್ಲಿನ ವಾತಾವರಣ ರೋಗಿಗಳಿಗೆ ಅನುಕೂಲವಾಗಿದ್ದು ಅವರಿಗೆ ಯೋಗ, ಪ್ರಾಣಾಯಾಮ, ಮೊದಲಾದ ಧೈರ್ಯ ತುಂಬುವ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ವಿಶೇಷ ಕಾಳಜಿ ವಹಿಸಲಾಗುವುದು. ಎಲ್ಲ ನಾಗರಿಕರು ಕೋವಿಡ್ ಮುಕ್ತ ನಗರಕ್ಕೆ ಸಹಕರಿಸಬೇಕು ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರಥಮ ಮತ್ತು ದ್ವಿತೀಯ ಹಂತದ ಕೋವಿಡ್ ಸೋಂಕಿತರಿಗೆ ಉಪಚಾರ ನೀಡಲಾಗುವ ಈ ಸೆಂಟರ್ಗೆ ತಗಲುವ ಒಂದು ತಿಂಗಳಿನ ವೆಚ್ಚ ಸ್ವತಃ ಭರಿಸುವುದಾಗಿ ತಿಳಿಸಿದರು.
ಸಭೆ ಆರಂಭಕ್ಕೂ ಮುನ್ನ ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ಅಂತಿಮ ಹಂತದಲ್ಲಿರುವ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದ ಕಟ್ಟಡದ ಕಾಮಗಾರಿ ಪರಿಶೀಲಿಸಿದರು. ಅವಶ್ಯವಿದ್ದಲ್ಲಿ ಇಲ್ಲಿಯೂ ಸಹ ಕೋವಿಡ್ ಸೆಂಟರ್ ಆರಂಭಿಸಲಾಗುವುದು ಎಂದು ತಿಳಿಸಿದ ಸಚಿವೆ ಜೊಲ್ಲೆ ಒಂದು ತಿಂಗಳಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಾ. ವಿ.ಡಿ. ಡಾಂಗೆ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಡಿಎಚ್ಒ ಶಶಿಕಾಂತ ಮುನ್ಯಾಳ, ಟಿಎಚ್ಒ ಡಾ. ವಿ.ವಿ. ಶಿಂಧೆ, ಪೌರಾಯುಕ್ತ ಮಹಾವೀರ ಬೋರಣ್ಣವರ, ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ಸಿಪಿಐ ಸಂತೋಷ ಸತ್ಯನಾಯಿಕ, ಡಾ. ಸಂಗೀತಾ ದೇಶಪಾಂಡೆ, ಡಾ. ರಾಜೇಶ ಬನವನ್ನಾ ಇದ್ದರು.